Friday, March 30, 2018

ವರ್ತಮಾನಕ್ಕೆ ಹಿಡಿದ ಪ್ರತಿಮಾ ಕನ್ನಡಿ : ಕಾದಂಬರಿಯ ಸೃಜನಶೀಲ ಅನುವಾದ

ಪುಸ್ತಕ : ‘ದಮ್ಮಲಾಲ್ ಚೋಪ್ರಾ’ – ಕಾದಂಬರಿ  
ತೆಲುಗು ಮೂಲ : ಮಧುರಾಂತಕಂ ನರೇಂದ್ರ
ಕನ್ನಡಾನುವಾದ : ಕುಂ. ವೀರಭದ್ರಪ್ಪ
ಬೆಲೆ : ೧೦೦ ರೂ , ಪುಟ : ೧೧೨ 
ಪ್ರಕಾಶನ : ಆಕೃತಿ ಪುಸ್ತಕ, ಬೆಂಗಳೂರು    




ಹಿರಿಯ ಕಥೆಗಾರರಾದ ಕುಂವೀ ಅವರು, ಬಹಳ ಕಾಲದಿಂದಲೂ ತೆಲುಗಿನ ನೂರಾರು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಅವುಗಳಲ್ಲಿ ಹೊಸದು ಈಚೆಗೆ ಹೊರಬಂದ ''ದಮ್ಮ ಲಾಲ್ ಚೋಪ್ರ''. 
 ಇದು ತೆಲುಗಿನ ಕಥೆಗಾರ ಮಧುರಾಂತಕಂ ನರೇಂದ್ರ ಅವರ ' ಅಂಸ್ಟರ್ ಡ್ಯಾಮ್ ಲೋ ಅದ್ಬುತಂ'  ಎಂಬ  ಕಾದಂಬರಿಯ ಅನುವಾದವಾಗಿದೆ. ಸ್ವಲ್ಪ ಹೆಚ್ಚು ಸ್ವಾತಂತ್ರ್ಯವನ್ನು ಇಟ್ಟುಕೊಂಡು ಮಾಡಿದ ಈ ಅನುವಾದ ಮತ್ತೊಂದು ಸೃಜನಶೀಲ ಕೃತಿಯಾಗಿಯೇ ಕನ್ನಡಕ್ಕೆ ಬಂದಿರುವುದು ಸಂತಸದ ಸಂಗತಿ. 

ಒಬ್ಬ ಸೃಜನಶೀಲ ಬರಹಗಾರ ವರ್ತಮಾನಕ್ಕೆ ಹೇಗೆ ಸ್ಪಂದಿಸುತ್ತಾನೆ ಎನ್ನುವುದಕ್ಕೆ ಈ ಕಾದಂಬರಿ ಉತ್ತಮ ಉದಾಹರಣೆ. ತೆಲುಗಿನಲ್ಲಿ ೨೦೧೩ರ ಕೊನೆಯಲ್ಲಿ ಪ್ರಕಟಗೊಂಡ ಈ ಕೃತಿ, ಅಷ್ಟೇನೂ ಸದ್ದು ಮಾಡಲಿಲ್ಲ. ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲೇ ಮಾರುಕಟ್ಟೆಗೆ ಬಂದ ಕನ್ನಡ ಅನುವಾದ ಕೂಡ ಅಷ್ಟೇ. ಬಹುಶಃ ಕಾದಂಬರಿ ತನ್ನಲ್ಲಿ ಹುದುಗಿಸಿಕೊಂಡಿರುವ ಮೆಟಫರ್ ಗಳನ್ನೂ ಗುರುತಿಸುವಲ್ಲಿ ಓದುಗರು, ವಿಮರ್ಶಕರು ಸೋತಿರಬಹುದು ಅಥವಾ ಕಥನದ ದೀರ್ಘ ನಿರೂಪಣೆ ಕುತೂಹಲವನ್ನು ಹುಟ್ಟಿಸದೇ ಇರಬಹುದು. ಆದರೆ ಚೂರು ಗಮನವಿಟ್ಟು ಓದತೊಡಗಿದರೆ ಕಾದಂಬರಿಯ ಪಾತ್ರ ಮತ್ತು ವಿಷಯಗಳು  ನಮ್ಮ ಮುಂದೆ ವಿಸ್ಮಯದೊಂದಿಗೆ ಚಿತ್ರಿತವಾಗುತ್ತಾ ಹೋಗುತ್ತವೆ.          

ಈ ಕಥನವು ಜಾರ್ಜ್ ಅರ್ನವೆಲ್ ನ 'ದಿ ಅನಿಮಲ್ ಫಾರ್ಮ್', '1986' ಮತ್ತು ಬ್ರೆಕ್ಟ್ ನ ರಾಜಕೀಯ ಕವಿತೆಗಳನ್ನು ನೆನೆಪಿಸುತ್ತದೆ.  ವರ್ತಮಾನದ ರಾಜಕೀಯವನ್ನು ಮೆಟಾಫರ್ ಆಗಿ ಇಟ್ಟುಕೊಂಡು ಬಂದ ಕಾದಂಬರಿಗಳು ಈಚೆಗೆ ಕಂಡುಬಂದಿಲ್ಲ. (ನನ್ನ ಓದಿನ ಮಿತಿಯಲ್ಲಿ) ಆದರೆ ಈ ಕೃತಿ ವರ್ತಮಾನ‌ದ ರಾಜಕೀಯವನ್ನು ಅತ್ಯಂತ ಸ್ಪಷ್ಟವಾಗಿ ಎರಡು ಪಾತ್ರಗಳ ಮುಖೇನ ಕಟ್ಟಿಕೊಳ್ಳುತ್ತಾ ಸಾಗಿದೆ. ರಾಷ್ಟ್ರೀಯತೆ, ಹಿಂದಿ, ಆರ್ಯ-ದ್ರಾವಿಡ, ಸನ್ಯಾಸ-ಯೋಗ-ಅಗೋಚರ ಶಕ್ತಿ- ಸನಾತನ ಧರ್ಮ. ಇಸ್ಲಾಂ ಪೋಬಿಯಾ, ಇಸ್ಲಾಂ ಭಯೋತ್ಪಾದಕತೆ, ಭಾರತೀಯ ಸಮಾಜದ ವಿದ್ಯಾವಂತ ವರ್ಗ ಮತ್ತು ಅವರ ಅರಿವುಗೇಡಿತನ, ಅದ್ಬುತ ಒಂದರ ಭ್ರಮೆ ಸೃಷ್ಟಿಸುವ ಮನುಷ್ಯ.. ಇತ್ಯಾದಿಯಾದ ಕಥನದ ವಸ್ತು-ವಿಷಯಗಳು ಏನಿವೆಯೋ ಇದೇ ತೆರನಾದ ಕಥನೊದ್ದೇಶ ಅನಿಮಲ್ ಫಾರ್ಮ್ ನ ಕಥನದೊಳಗೂ ಹುದುಗಿದೆ. ಈ ಕಾದಂಬರಿಗಳ ದೇಶಕಾಲ ಮತ್ತು ಆಯಾಮಗಳು ಬೇರೆಯೇ ಆಗಿದ್ದರೂ ಅವು ಚಿತ್ರಿಸಿರುವ ರಾಜಕೀಯ ರೂಪಕಗಳು ಮತ್ತು ಸಂರಚನೆಯ ಉದ್ದೇಶ ಒಂದೇ ಆಗಿದೆ. 

ಕಾದಂಬರಿಯಲ್ಲಿ ಮೂರು ಮುಖ್ಯ ಪಾತ್ರಗಳಿವೆ.  ದಮ್ಮಲಾಲ್ ಚೋಪ್ರ, ಕಥಾ ನಿರೂಪಕ ಮತ್ತು ಅಂಸ್ಟರ್ ಡ್ಯಾಮ್ ವಿಮಾನ ನಿಲ್ದಾಣ. ಪ್ರೊಫೆಸರ್ ಆಗಿರುವ ಕಥಾ ನಿರೂಪಕನ ಜೊತೆ ವ್ಯಾಪಾರಿಯಗಿರುವ ಚೋಪ್ರ ಭಾರತದಿಂದ ಮೆಕ್ಸಿಕೋ ಗೆ ಅಂಸ್ಟರ್ ಡ್ಯಾಮ್ ಮೂಲಕ ಪ್ರಯಾಣಿಸುವುದೇ ಮೊದಲ ರೂಪಕವಾಗಿದೆ. ಚೋಪ್ರ ರಾಜಸ್ತಾನದವನು ಅವನಿಗೆ ತನ್ನ ಭಾಗದ ಹಿಂದಿ ಬಿಟ್ಟರೆ ಬೇರೆ ಭಾಷೆ ಬಾರದು. ನಿರೂಪಕ ಆಂಧ್ರ ರಾಜ್ಯದವನು ಆತನಿಗೆ ತೆಲಗು, ಇಂಗ್ಲಿಶ್ ಬಿಟ್ಟರೆ ಬೇರೆ ಭಾಷೆಬಾರದು, ಬಂದರೂ ಹರಕು ಹಿಂದಿ. ಆದರೆ ಹಿಂದಿಯ ಮಾತುಕತೆಯನ್ನು ಬಯಸುವ ಚೋಪ್ರ ತುಂಬಾ ವಿಲಕ್ಷನಕಾರಿ ಮನುಷ್ಯ. ಆತ ಯಾವುದೊ ಅತೀಂದ್ರಿಯ ಶಕ್ತಿಯನ್ನು ಪಡೆದವನಂತೆ  ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ ನಡೆಯಲಿದೆ. ಅದನ್ನು ಯಾರೂ ತಪ್ಪಿಸಲಾಗದು ಅದಕ್ಕಾಗಿಯೇ ತಾನು ಅಲ್ಲಿಗೆ ಹೋಗುತ್ತಿರುವುದಾಗಿ ಕಾದಂಬರಿಯ ಕಡೆಯ ವರೆವಿಗೂ ಕನವರಿಸುತ್ತಲೇ ಇರುತ್ತಾನೆ. ಹಾಗಿದ್ದರೆ ಏನದು ಅದ್ಬುತ?! 
ಈ ಅದ್ಬುತವು ಈ ಕಾದಂಬರಿಯನ್ನು ಒಂದು ಪತ್ತೇದಾರಿ ಕಥನದಂತೆ ಕೊನೆಯವರೆಗೂ ನಮ್ಮನ್ನು ಎಳೆದುಕೊಂಡು ಹೋಗುತ್ತದೆ. ಕಾದಂಬರಿಯ ಪೂರ್ತಿ ತುಂಬಿರುವ ಈ ಅದ್ಬುತ ‘ ಅಚ್ಚೇ ದಿನ್’ ತರಹದ ಹೇಳಿಕೆಯಂತೆ ಕಂಡು ಬಂದರೆ ಆಶ್ಚರ್ಯ ಪಡಬೇಕಿಲ್ಲ. ಯಾಕಂದರೆ ಕೊನೆಗೂ ಆ ಅದ್ಬುತ ಎಲ್ಲಿ ಹೇಗೆ ಘಟಿಸಿತು ಎಂಬುದನ್ನು ನೀವು ಕಾದಂಬರಿ ಓದಿಯೇ ತಿಳಿಯಬೇಕು. ಆದರೆ ಈ ಚೋಪ್ರ ಸಾಮಾನ್ಯನಲ್ಲ ಅದ್ಬುತವೊಂದರ ಭ್ರಮೆ ಸೃಷ್ಟಿಸುತ್ತಾ ಕಥಾ ನಿರೂಪಕನನ್ನ ಹೆದರಿಸುತ್ತಾ ಅವನಿಂದ ರಕ್ಷಣೆ ಪಡೆಯುತ್ತಾ ಸಾಗುವ ವಿಲಕ್ಷಣ ಪಾತ್ರ. ನಿಂತಲ್ಲಿ, ಕೂತಲ್ಲಿ    ‘ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ.. ಅಂಸ್ಟರ್ ಡ್ಯಾಮ್ ನಲ್ಲಿ ಅದ್ಬುತ’ ಅಂತ ಬಡಬಡಿಸುವುದು, ಟಾಯ್ಲೆಟ್ಟಿನ ಕಮೋಡ್ ಮೇಲೆ ಪದ್ಮಾಸನ ಹಾಕಿ ಕುಳಿತು ಧ್ಯಾನ ಮಾಡುವುದು, ಏನೇನೋ ಬೀಜಾಕ್ಷರಗಳನ್ನು ಜಪಿಸುವುದು, ಅಸಂಬದ್ದವಾಗಿ ಕವಿತೆ, ಮಂಡಲ, ಯಂತ್ರ-ಮಂತ್ರಗಳನ್ನು ಡೈರಿಯಲ್ಲಿ ಬರೆಯುವುದು. ಭಯೋತ್ಪಾದನೆ ಕುರಿತು ಉದ್ದುದ್ದ ಭಾಷಣ ಮಾಡುವುದು, ಮಕ್ಕಳ ತಿಂಡಿ ಕದ್ದು ತಿನ್ನುವುದು, ತಂದೆಯ ವಾರ್ಷಿಕ ತಿಥಿಯೆಂದು ತಿನ್ನದೆ ಇರುವ ನಾಟಕ ಮಾಡುವುದು, ಇದೆಲ್ಲಾ ರಗಳೆಗಳಿಂದ ವಿಮಾನ ನಿಲ್ದಾಣದ ಅಧಿಕಾರಿಗಳ ಸಂದೇಹಕ್ಕೆ ಸಿಕ್ಕು ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆಗೆ  ಒಳಗಾಗುವುದು. ಹೀಗೆ ಕೇವಲ ೨೪ ಗಂಟೆಗಳ ಕಾಲ ವಿಮಾನ ಕಾಯುವ ಅವಧಿಯಲ್ಲಿ ಈತನ ವಿಶ್ವರೂಪವನ್ನು ಕಾದಂಬರಿಯ ನಿರೂಪಕ ನಮ್ಮ ಮುಂದೆ ಚಿತ್ರಿಸುತ್ತಾ ಹೊಗಿತ್ತಾನೆ. ಇಲ್ಲಿ ಹೆಚ್ಚು ಮೆಟಫರ್ ಗಳಿಂದ ಕಥನವನ್ನು ಕಟ್ಟಿಕೊಳ್ಳುವಾಗ ಕೆಲವು ಕಡೆ ವಿಪರೀತವಾದ ವಿವರಣೆಗಳು ಓದುಗನನ್ನು ಸುಸ್ತು ಮಾಡುತ್ತವೆ. ಇದನ್ನು ಓದುವಾಗ ಕೊಡುವ ಚಲನಚಿತ್ರದ ಮಾದರಿಯ ಅನುಭವವನ್ನು ಮರೆಯಲಾಗದು.   

ಈ ಎರಡು ಪಾತ್ರಗಳ ಮೂಲಕ ಧಾರ್ಮಿಕ ಮೂಲಭೂತವಾದ ಹೇಗೆ ಬಹುತ್ವದ ಸಮಾಜದೊಳಗೆ ವಿದ್ಯಾವಂತ ಜನರಿಂದ ಹರಡಿಕೊಳ್ಳುತ್ತಿದೆ ಎಂಬುದನ್ನುಸಲೀಸಾಗಿ ನಿರೂಪಿಸಲಾಗಿದೆ. MBA ಪದವಿಧರನಾದ ಚೋಪ್ರ, ಮೆಕ್ಸಿಕೋ ಗೆ ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಬಂದು ಅಂಸ್ಟರ್ ಡ್ಯಾಮ್ ಅದ್ಬುತ, ಅಗೋಚರ ಶಕ್ತಿಗಳ ಜೊತೆ ಮಾತುಕತೆ, ದನದ ಮಾಂಸ ಆಹಾರದ ಬಗ್ಗೆ ಕಿಡಿಕಾರುವುದು, ಸನಾತನ-ಯೋಗ-ಧರ್ಮ ಸಂರಕ್ಷಣೆ, ಅದಕ್ಕಾಗಿ ಸೇನೆ ಕಟ್ಟುತ್ತಿನಿ ಎನ್ನುವುದು, ಕಡೆಗೆ ತನ್ನ ಸಹಪ್ರಯಾಣಿಕನಾದ ಕಥಾ ನಿರೂಪಕನ ಜಾತಿ- ಧರ್ಮ ಯಾವುದು ಅಂತ ಹುಡುಕುವುದು – ಇದೆಲ್ಲವೂ ವರ್ತಮಾನದಲ್ಲಿ ನಮ್ಮ ಮುಂದೆ ನಡೆಯುತ್ತಿರುವ ಸಂಗತಿಗಳು. ಸರಕಾರದ ಮಂತ್ರಿಗಳು, ಅವರ ವಕ್ತಾರರು ಯಾವುದೇ ಅಂಜಿಕೆ, ಅಳುಕು ಇಲ್ಲದೆ ಘಂಟಾಘೋಷವಾಗಿ ಒಂದು ಸಂಸ್ಕೃತಿ, ಒಂದು ಧರ್ಮ, ಒಂದು ಭಾಷೆ ಹೇರುತ್ತಿರುವ ಹೊತ್ತಿನಲ್ಲಿ ಈ ಕಾದಂಬರಿಯು ತೋರಿಸುತ್ತಿರುವ ಚಿತ್ರ ದೊಡ್ಡ ಕ್ಯಾನ್ವಸಿನದು. .

ನಡುವೆ ಏರ್ಪೋರ್ಟ್ ಲಾಂಜ್ ನಲ್ಲಿರುವ ದೊಡ್ಡ ಭೂ-ಗೋಲದ ಆಕಾರದ ಆಟಿಕೆಯ ಪ್ರಸ್ತಾಪ ಬಹು ಆಸಕ್ತಿಕರವಾಗಿದೆ.  ಅಲ್ಲಿಗೆ ಬಂದು ಆಟವಾಡುವ ಅಮೇರಿಕಾ ಮತ್ತು ರಷ್ಯ ಮಕ್ಕಳು, ತಮ್ಮ ಪಾಡಿಗೆ ತಾವಿರುವ ತಂದೆತಾಯಿ, ಅವರ ಬಗ್ಗೆ ಚೋಪ್ರ ಮತ್ತು ನಿರೂಪಕನ ಅಭಿಮತ.. ಇತ್ಯಾದಿಗಳ ನಡುವೆ ವಿಶ್ವವನ್ನು ಅಮೇರಿಕಾ, ರಷ್ಯಾ ಹಾಗು ಜರ್ಮನ್ ಹೇಗೆ ಕಬಳಿಸಿ ಹಾಳುಮಾಡಲು ಪದೇ ಪದೇ ಯತ್ನಿಸುತ್ತಿವೆ ಎಂಬುದು ಸೂಚ್ಯವಾಗಿ ತಿಳಿಸಲಾಗಿದೆ. ಜೋತೆಗೆ  ಅದೇ ಲಾಂಜ್ ನಲ್ಲಿ  ಭಾರತವನ್ನು ಪ್ರತಿನಿಧಿಸುವ ಎರಡು ಪಾತ್ರಗಳು ಕೂಡ ಉಪಸ್ಥಿತರಿದ್ದುವು.. ಪ್ರಸಕ್ತ ಭಾರತದ ಕೋಲಾಹಲವನ್ನು ತಣ್ಣಗೆ ನಿರೂಪಿಸುತ್ತ!   


ಕಾದಂಬರಿಯ ಕಡೆಯ ವರೆಗೂ ಚೋಪ್ರನೊಂದಿಗೆ ಏಗುವ ಕಥಾ ನಿರೂಪಕ ಇನ್ನೇನೋ ದೆಹಲಿಗೆ ಮರಳುವ ಹೊತ್ತಿನಲ್ಲಿ ಚೋಪ್ರ ತಾನೇ ‘ನಿನ್ನ ರಕ್ಷಣೆ ಮಾಡಿದನೆಂದು, ನಿನ್ನ ಜಾತಿ ಯಾವುದು ಎಂದು ನನಗೆ ಗೊತ್ತಿದೆ. ಅದನ್ನು ಮೆಕ್ಸಿಕೋ ಬಂದಾಗಲೇ ನನಗೆ ಪರಿಚಯವಿರುವ ತಿರುಪತಿಯ ಗೆಳೆಯನೋಬ್ಬನಿಂದ ವಿಚಾರ ಮಾಡಿದೆನೆಂದು’ ಹೇಳಿದಾಗ ಕಥಾ ನಿರೂಪಕ ದಿಗ್ಭ್ರಾಂತ ನಾಗುತ್ತಾನೆ. ಇದುವರೆಗೂ ಇದ್ದ ಕಥೆಯ ರೋಚಕತೆ ಬೇರೆಗೆಡೆಗೆ ತಿರುಗುತ್ತದೆ. ಇಂತಹ ಅರೆಹುಚ್ಚನೊಂದಿಗೆ ಅದೆಲ್ಲವನ್ನು ವಿವರಿಸುವ ಅಗತ್ಯವಿಲ್ಲವೆಂದು ಕಥಾ ನಿರೂಪಕ ಮೌನಕ್ಕೆ ಜಾರುತ್ತಾನೆ. ಮತ್ತೆ ಚೋಪ್ರ ‘ಅಂಸ್ಟರ್ ಡ್ಯಾಮ್ ಅದ್ಬುತ.. ಅಂಸ್ಟರ್ ಡ್ಯಾಮ್ ಅದ್ಬುತ’ ಎಂದು ಕೂಗಿಕೊಳ್ಳುತ್ತಾನೆ. ಆದರೆ ಕಥಾ ನಿರೂಪಕನ ಮೌನ ಎನ್ನುವುದು ವರ್ತಮಾನದಲ್ಲಿ ಅದ್ಬುತದ ಭ್ರಮೆ ಹುಟ್ಟಿಸುತ್ತಿರುವ ಸರಕಾರ / ನಾಯಕರ ಮುಂದಿನ ಸಾಮಾನ್ಯ ನಾಗರಿಕನ ಮೌನ ಕೂಡ ಆಗಿದೆ ಎಂಬುದನ್ನು ತಿಳಿಯಲು ನಮಗೆ ಹೆಚ್ಚು ಸಮಯ ಬೇಕಾಗುವುದಿಲ್ಲ.  
               
ತನ್ನ ವರ್ತಮಾನಕ್ಕೆ ಪ್ರತಿಸ್ಪಂದಿಸದ ಒಬ್ಬ ಸೃಜನಶೀಲ ಬರಹಗಾರ ಇರಲಾರ. ಅದರಲ್ಲೂ ಅರಾಜಕತೆ ಮತ್ತು ಅಸಮಾನತೆಯು ಹೆಚ್ಚಾದಂತೆಲ್ಲಾ ಆ ಬಗೆಗಿನ ತಲ್ಲಣಗಳು ಸೃಜನಶೀಲ ಕೃತಿಗಳ ಮೇಲೆ ಮೂಲಕ ಹೊರಬೀಳುವುದು ಸಾಮಾನ್ಯ ಸಂಗತಿ. ಆದರೆ ವರ್ತಮಾನದ ಭಾರತದಲ್ಲಿ ಅಂತಹ ಸೃಜನಶೀಲ ಚಟುವಟಿಕೆಗಳಿಗೆ ಪ್ರತಿಗ್ರಾಮಿ ಸಂಸ್ಕೃತಿಯಿಂದ ಬೆದರಿಕೆಗಳು ಶುರುವಾಗಿವೆ ಮಾತ್ರವಲ್ಲ ಕೌರ್ಯ ಕೊಲ್ಲುವವರೆಗೆ ಬಂದು ನಿಂತಿದೆ. ಇಂತಹ ಹೊತ್ತಿನಲ್ಲಿ ಯಾವ ಪಕ್ಷ, ಸರಕಾರ ಇತ್ಯಾದಿಗಳನ್ನು ತೋರಿಸದೆ ಎರಡು ಪಾತ್ರಗಳ ಮೂಲಕ ಭಾರತ ದರ್ಶನ ಮಾಡಿಸಿದ ಮಧುರಂತಕಂ ನರೇಂದ್ರ ಹಾಗು ಕುಂವೀ ಅವರಿಗೆ ಅಭಿನಂದಿಸಬೇಕು. ಈ ಕಾದಂಬರಿಯೊಳಗೆ ಹರಿದಿರುವ ಪ್ರಜ್ಞಾಪ್ರವಾಹ, ರೂಪಕಗಳ ಪ್ರವಾಹದಲ್ಲಿ ಅದರ ಜನಪ್ರಿಯ ಮಾದರಿಯ ನಿರೂಪಣೆ ಕೊಚ್ಚಿ ಹೋಗಿದೆ. ಹಾಗಾಗಿ ವಿವರಪೂರ್ಣವಾದ ಓದಿಗೆ ಸಾವಧಾನ-ಸಾವಕಾಶ ಎರಡೂ ಬೇಕು.

Friday, June 2, 2017

ಅರ್ಥಶಾಸ್ತ್ರ

ಚಾಣಕ್ಯನ ಬಿಚ್ಚಿದ ಶಿಖೆಯ
ಗುತ್ತಿಗೆ ಪಡೆದಂತೆ ಅರ್ಥಶಾಸ್ತ್ರವ
ಉಸುರುತ್ತಿದ್ದ ಗಿಳಿಗಳು ಮಾಯಾವಾಗಿವೆ.
ನೀವು ಕಾಣಿರೆ ನೀವು ಕಾಣಿರೆ
ಯಾವ ಅಡ್ಡೆಯೊಳಗೆ ಅವಿತು ಹೋದವೆಂದು?
ಬೀಭತ್ಸ ಭಾಷಣಕಾರ ಪ್ರಧಾನಿಗಳು
ಇಂದು ಉಪವಾಸ, ನಾಳೆ ಯೋಗಾಸನ
ನಾಳಿದ್ದಿನಿಂದ ನಲವತ್ತು ದೇಶಪರ್ಯಟನೆ
ದ್ವಿಪಕ್ಷೀಯ ಮಾತುಕತೆಗೆ ಕ್ಯಾಮೆರಾದವರೊಡನೆ!
ಇಲ್ಲಿ ನಿತ್ಯನಾರಕ, ನಿಲ್ಲದ ನರಮೇಧ
ಹರಿದ ಸೆರಗುಗಳೊಳಗೆ ಕರಗಿದ ಹೂಗಳು
ಉಣ್ಣುವ ತಟ್ಟೆಗಳ ತಡಕಾಡುವ ಗೂಂಡಾಗಳು ;
ರದ್ದುಗೊಂಡ ನೋಟುಗಳಲಿ ಮಾಸಿಹೋದ ಕನಸುಗಳು
ನಿಂತುಹೋದ ಕಾರ್ಖಾನೆಗಳು, ಹಸಿವುಗೆಟ್ಟ ಹೊಟ್ಟೆಗಳು
ಒಣಗಿದ ಗದ್ದೆ, ಬದುಕಲಾರದ ಬಡಜೀವಗಳು
ಕಿತ್ತುತಿನ್ನುವ ತೆರಿಗೆಗಳು, ಬ್ಯಾಂಕುಗಳು ಜೊತೆಗೆ
ದೇಶಭಕ್ತಿಯ ಬಂಡಲುಬಡಾಯಿಗಳು.
ಲೆಕ್ಕಬಾರದ, ಗಂಟಲು ಸೇದುಹೋದ ಆ ಗಿಳಿಗಳ
ನೀವು ಕಾಣಿರೆ! ನೀವು ಕಾಣಿರೆ!
ಕಂಡಲ್ಲಿ ಕೊರಳು ಪಟ್ಟಿಯಿಡಿದು ಕೇಳಿರೆ
ಎಲ್ಲಿ ಚಾಣಕ್ಯನ ಅರ್ಥಶಾಸ್ತ್ರ?
ಎಲ್ಲಿ ಚಿನ್ನ ಹೊದಿಸಿದ ಹೆದ್ದಾರಿಗಳು?
ಎಲ್ಲಿ ಹದಿನೈದು ಲಕ್ಷರುಪಾಯಿಗಳು?
ಅಸಲಿಗೆ
ಭಾಷಣಕೋರರ ಮಾತುಸೋತ ಭಾರತದಲಿ
ಅರ್ಥಶಾಸ್ತ್ರವೆಂದರೆ ಎರಡುದ್ದರಣೆ ಗೋಮೂತ್ರ! ~

Wednesday, May 17, 2017

ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು...




ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು....

ಅಡುಗೆ ಅನ್ನುವುದು ಅಧ್ಯಾತ್ಮ  ನನ್ನ ಪಾಲಿಗೆ. ಐದು ಇಂದ್ರಿಯಗಳನ್ನೂ ಒಂದೆಡೆ ಕೂತು ಕಟ್ಟಿ ಹಾಕುವುದಕ್ಕಿಂತಲೂ ನಿಸರ್ಗದತ್ತವಾದ ಹಾದಿಯಲ್ಲಿ ಅವನ್ನು ಅವುಗಳ ಪಾಡಿಗೆ ಹಾರಲು ಬಿಡುವುದೇ ಅಧ್ಯಾತ್ಮ ಅನ್ನುವುದು ನನ್ನ ಡೆಫೆನೇಷನ್ನು. ಅಂತಹ ಒಂದು ಹಾದಿ ಅಡುಗೆ. ಕಾರಣ ಎಲ್ಲಾ ಕಾಲದಲ್ಲೂ ಮನುಷ್ಯನಿಗೆ ಆಹಾರ ಅನ್ನುವುದು ಬಹಳ ನೆಚ್ಚಿನ ವಿಷಯವೇ ಆಗಿತ್ತು. ಅದು ಬದುಕಿನ ಅನಿವಾರ್ಯತೆ ವಿಚಾರವಷ್ಟೇ ಅಲ್ಲದೆ ಅಭಿರುಚಿಯ ವಿಚಾರವೂ ಆಗಿತ್ತು.
ಮನುಷ್ಯ ಉಭಯಾಹಾರಿ ( ಸಸ್ಯ ಮತ್ತು ಮಾಂಸ) ಆಗಿದ್ದುದ್ದೇ ಅಡುಗೆಯ ವಿಚಾರದಲ್ಲಿ passionate ಆಗಲು ಕಾರಣವೂ ಇರಬಹುದು. ಭಾರತ ಉಪಖಂಡದಲ್ಲಂತೂ ಅಡುಗೆ ಎನ್ನುವುದು ಒಂದು ಶಾಸ್ತ್ರವೇ ಆಗಿದೆ. ಸಾವಿರಾರು ವರ್ಷಗಳ ಹಿಂದೆಯೇ ಬಹಳಷ್ಟೂ ಕೃತಿಗಳು ಈ ಬಗ್ಗೆ ಬಂದಿವೆ. ಕನ್ನಡನಾಡಿನಲ್ಲಂತೂ  ಮೂರನೆಯ ಸೋಮೇಶ್ವರನ ಮಾನಸೋಲ್ಲಾಸ’, ಚಾವುಂಡರಾಯನ ಲೋಕೋಪಕಾರಂ, ಮೂರನೆಯ ಮಂಗರಸನ ಸೂಪಶಾಸ್ತ್ರ, ಕೆಳದಿ ಬಸಪ್ಪ ನಾಯಕನಶಿವತತ್ವ ರತ್ನಾಕರಮೊದಲಾದ ಪ್ರಾಚೀನ ಕೃತಿಗಳು ಬಂದಿವೆ.
ಮತ್ತು ಇವರು ಯಾರೂ ಎಲ್ಲೂ ಸಸ್ಯ ಮತ್ತು ಮಾಂಸಾಹಾರವೆಂಬ ಭೇದ ತೋರದೆ ಬಗೆಬಗೆಯ ಮಾಂಸಾಹಾರೀ ಅಡುಗೆಗಳ ಬಗ್ಗೆ ವಿವರಿಸಿದ್ದಾರೆ. ಸೋಮೇಶ್ವರನಂತೂ ಹಂದಿ ಮಾಂಸದ ಚಕ್ಕುಲಿಯಿಂದ ಹಿಡಿದು ವಡೆ, ತರಕಾರಿಗಳೊಂದಿಗೆ ಹುರಿದು ಮಾಡುವ ಬಗೆ ಬಗೆಯ ಭಕ್ಷ್ಯಗಳನ್ನು ವಿವರಿಸಿದ್ದಾನೆ. ಸ್ವತಃ ಜೈನ ಧರ್ಮದವನಾದ ಚಾವುಂಡರಾಯ ಕೂಡ ತನ್ನ ಕೃತಿಯಲ್ಲಿ ಮಾಂಸಾಹಾರದ ಖಾದ್ಯಗಳ ಬಗ್ಗೆ ಬಹಳವಾಗಿ ಬರೆದಿದ್ದಾನೆ. ಇದಿಷ್ಟೂ ಪೀಠಿಕೆ ಯಾಕೆ ಹೇಳಿದೆನೆಂದರೆ ನಮ್ಮ ಆಹಾರ ಪದ್ದತಿಯಲ್ಲಿ ಸಸ್ಯ ಮತ್ತು ಮಾಂಸ ಎಂಬ ಮಡಿ ಎಂಬುದು ಇಲ್ಲ. ಆಹಾರ ಕ್ರಮ ಅವನ ಹಕ್ಕು ಎನ್ನುವುದನ್ನು ನಮ್ಮ ಪೂರ್ವಿಕರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದನ್ನು ವರ್ತಮಾನದಲ್ಲಿ ನಾವು ಅರ್ಥಮಾಡಿಕೊಳ್ಳುವುದು ತೀರ ತುರ್ತಿನ ವಿಚಾರವಾಗಿದ್ದರಿಂದ ನೆನೆಪಿಸಬೇಕಾಯಿತು ಅಷ್ಟೇ!

ಈವಾಗ ಆ ಮಾತಿನಿಂದ ಊಟಕ್ಕೆ ಮರಳೋಣ :
ದಕ್ಷಿಣ ಕರ್ನಾಟಕದಲ್ಲಿ ಬಾಡೂಟ ಬಹಳ ಪ್ರಸಿದ್ದಿ. ಕಾರಣ ಇಲ್ಲಿನ ಜನರ ಆಹಾರ ಸಂಸ್ಕೃತಿಯಲ್ಲಿ ಮಾಂಸಾಹಾರಕ್ಕೆ ಹೆಚ್ಚು ಪ್ರಾಧಾನ್ಯತೆ, ಹಲವು ದೈವೀಕ ಆಚರಣೆಗಳಲ್ಲಿ ಬಾಡೂಟ ಇರಲೇಬೇಕು. ಇದ್ದೇ ಇರುತ್ತದೆ.  ಅಲ್ಲದೆ ಇಲ್ಲಿನ ವಿಶೇಷವೆಂದರೆ ಬಹಳಷ್ಟು ತರದ ಮಾಂಸಗಳನ್ನು ಅಡುಗೆಯಲ್ಲಿ ಬಳಸುವುದು. ಮತ್ತು ಕೆಲವು ಆಯಾ  ಋತುಮಾನಗಳಿಗೆ ತಕ್ಕನಾದ ರಸಪಾಕಗಳನ್ನು ಮಾಡುವುದರಿಂದ ತಿನ್ನಲು ಇನ್ನೂ ಸೊಗಸಾಗಿರುವುದೂ ಕೂಡ .
ಅಂತಹ ಒಂದಷ್ಟು ಭರ್ಜರಿ ಬಾಡೂಟ ಕ್ರಮಗಳನ್ನು ಹೇಳುವವನಿದ್ದೇನೆ. ಅಸಲಿಗೆ ಇದು ಜನಪದರು ಈಗಾಗಲೇ ಬಳಸುತ್ತಿರುವುದರ ಜೊತೆಗೆ ಒಂದಷ್ಟು ಸ್ವತಃ ನಾನು ಸೇರಿಸಿಕೊಂಡು ಮಾಡಿದ ಹೊಸ ಬಗೆಯ ಅಡುಗೆಯ ವಿವರಣೆಗಳು. ಮತ್ತು ಕೆಲವು ತಾಳೆಯಾಗದ ಜೊತೆಗಾರಿಕೆಗಳೆಂದು ಬಳಸದೇ ಇರುವ ಪದಾರ್ಥಗಳೂ ಇಲ್ಲಿ ಸೇರಿಕೊಂಡಿವೆ.  ಅದಷ್ಟೂ ಸರಳವಾಗಿರುವ ಈ ಅಡುಗೆಗಳಿಗೆ ಹೆಚ್ಚು ಸಿದ್ದತೆ ಮತ್ತು ಸಮಯ ಬೇಕಾಗಿಲ್ಲ. ಅಡುಗೆಯ ಬಗ್ಗೆ ಹೆಚ್ಚು ಪ್ರೀತಿ ಇಟ್ಟುಕೊಂಡ ಒಬ್ಬರೇ ನಿಭಾಯಿಸಬಹುದು. ಮಾತಿಗೆ ಇನ್ನೊಬ್ಬರು ಜೊತೆಯಲ್ಲಿದ್ದರೆ  ಅಡುಗೆಯ ಜೊತೆಯಲ್ಲಿಯೇ ಅರೆಬೆಂದ ಮಾಂಸದ ರುಚಿ ನೋಡಬಹುದು. ಅದು ಸಕ್ಕತ್ತಾಗಿರುತ್ತದೆ ;)      

  • ಎಲ್ಲ ಬಗೆಯ ಮಾಂಸಗಳನ್ನು ಬಿಸಿನೀರಿನಲ್ಲಿ 2-3 ತೊಳೆಯುವುದು ಒಳ್ಳೆಯದು
  • ಅಡುಗೆಗೆ ಎಣ್ಣೆ ಬಹಳ ಮಿತವಾಗಿ ಬಳಸಬೇಕು. ಮಾಂಸದಲ್ಲಿಯೇ ಹೆಚ್ಚಿನ ಕೊಬ್ಬು ದೊರಕುವುದರಿಂದ ಹೆಚ್ಚಿಗೆ ಹಾಕುವುದು ಅನಾವಶ್ಯಕ  
  • ನಮ್ಮ ಅಡುಗೆಯಲ್ಲಿ ಇಂತಿಷ್ಟು ಚಮಚ, ಇಂತಿಷ್ಟು ಗ್ರಾಂ , ಕಿಲೋ ಎಂದು ಹೇಳುವುದು ಭಾಳ ಕಷ್ಟ
ಎಷ್ಟು ಜನಕ್ಕೆ ಅಡುಗೆ ಮಾಡಬೇಕು ಅಂದು ಹೇಳಿ ನೇರವಾಗಿ ಹಿಡಿ, ಬೊಗಸೆ, ಚಿಟಿಕೆ ಎಂಬ ಮಾನದಂಡದಲ್ಲಿ ಅಡುಗೆ ಮಾಡಿ ಮುಗಿಸುತ್ತೇವೆ. ಪದಾರ್ಥವನ್ನು  ಐದು ಬೆರಳು  ಹಿಡಿದಾಗಲೇ ಎಷ್ಟು ಪ್ರಮಾಣ ಹಾಕಬೇಕೆಂದು ಬಾಣಸಿಗನ ಪ್ರಜ್ಞೆಗೆ ಅರಿವಾಗುವುದು . ನಮ್ಮ ಅಮ್ಮಂದಿರಿಗಂತೂ ಈ ಕ್ರಮ ಕರಗತ.



 



1. ಟೋಮೊಟೊ ಕೋಳಿಗೊಜ್ಜು : (Tomato Chicken fry )


ಇದನ್ನು ರೆಡ್ ಚಿಲ್ಲಿ ಚಿಕನ್ ಅಂತಲೂ ಕರಿಯಬಹುದು. 
ಕೋಳಿ ಮಾಂಸ: ½ ಕೆಜಿ
ಕಾಳು ಮೆಣಸಿನ ಪುಡಿ  : 2 ಚಮಚ
ಶುಂಠಿ-ಬೆಳ್ಳುಳ್ಳಿ ಮಿಶ್ರಣ ; 50 ಗ್ರಾಂ ನಷ್ಟು
ಹಚ್ಚಿದ ಈರುಳ್ಳಿ : ಒಂದು ಹಿಡಿಯಷ್ಟು
ಹಚ್ಚಿದ ಅಥವಾ ರುಬ್ಬಿದ ಟೋಮೊಟೊ : ಒಂದು ಬೊಗಸೆಯಷ್ಟು
ಹಸಿರು ಮೆಣಸಿನಕಾಯಿ : ಐದು
ಗರಂ ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು ಮೆಣಸಿನಕಾಯಿ ಪುಡಿ : 4 ಚಮಚ
ಅರಿಶಿನ ಪುಡಿ : 3 ಚಿಟಿಕೆ
ಕೊತ್ತಂಬರಿ ಸೊಪ್ಪು: ಅರ್ಧ ಹಿಡಿ
ಎಣ್ಣೆ : 4 ಚಮಚ
ಉಪ್ಪು :  ರುಚಿಗೆ ತಕ್ಕಷ್ಟು



ಮಾಡುವ ವಿಧಾನ:  ಬಾಣೆಲೆಯಲ್ಲಿ  ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಕೋಳಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.  ಮಾಂಸದ ನೀರು ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಟೋಮೊಟೊ, ಕಾಳು ಮೆಣಸಿನ ಪುಡಿ,  ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ,  ಹಾಕಿ ಬಾಡಿಸಿ.  100 ml ನಷ್ಟು ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ ಒಲೆಯಿಂದ ಕೆಳಗಿಳಿಸಿ  ಕೊತ್ತಂಬರಿ ಸೊಪ್ಪು ಉದುರಿಸಿ. 
ರಾಗಿ ಮುದ್ದೆ, ಅನ್ನ , ಚಪಾತಿ ರೊಟ್ಟಿ ಜೊತೆಗೆ ಅಲ್ಲದೆ ಬಿಡಿಯಾಗಿ ಕೋಳಿಗೊಜ್ಜನ್ನೇ ತಿನ್ನಲೂಬಹುದು. 


2. ಹುರಿದ ಚಿಕನ್ನವಲಕ್ಕಿ (Chicken fried Flattened rice)


ಇದನ್ನು ಅವಲಕ್ಕಿ ಚಿಕನ್ ಬಿರಿಯಾನಿ  ಅಂತಲೂ ಕರಿಯಬಹುದು. 
ಕೋಳಿ ಮಾಂಸ: ½ ಕೆಜಿ
ಗಟ್ಟಿ ಅವಲಕ್ಕಿ ; ½ ಅರ್ಧ ಕೆಜಿ
ಕಾಳು ಮೆಣಸಿನ ಪುಡಿ  : 2 ಚಮಚ
ಶುಂಠಿ-ಬೆಳ್ಳುಳ್ಳಿ ಮಿಶ್ರಣ ; 100 ಗ್ರಾಂ ನಷ್ಟು
ಉದ್ದಕೆ ಹಚ್ಚಿದ ಈರುಳ್ಳಿ : ಒಂದು ಹಿಡಿಯಷ್ಟು
ಹಚ್ಚಿದ ಟೋಮೊಟೊ : ಒಂದು ಹಿಡಿಯಷ್ಟು
ದೊನ್ನೆ ಮೆಣಸಿನಕಾಯಿ : ಒಂದು ಹಿಡಿಯಷ್ಟು
ಹಸಿರು ಮೆಣಸಿನಕಾಯಿ : ಐದು (ಸಣ್ಣಗೆ ಹಚ್ಚಿರಬೇಕು)
ಗರಂ ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು ಮೆಣಸಿನಕಾಯಿ ಪುಡಿ : 4 ಚಮಚ
ಅರಿಶಿನ ಪುಡಿ : 3 ಚಿಟಿಕೆ
ಕೊತ್ತಂಬರಿ ಸೊಪ್ಪು: ಅರ್ಧ ಹಿಡಿ
ಎಣ್ಣೆ : 4 ಚಮಚ
ಉಪ್ಪು :  ರುಚಿಗೆ ತಕ್ಕಷ್ಟು



ಮಾಡುವ ವಿಧಾನ:  ಬಾಣೆಲೆಯಲ್ಲಿ  ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಕೋಳಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.  ಮಾಂಸದ ನೀರು ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಟೋಮೊಟೊ, ಕಾಳು ಮೆಣಸಿನ ಪುಡಿ,  ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ,  ಹಾಕಿ ಬಾಡಿಸಿ.  200 ml ನಷ್ಟು ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ ಒಲೆಯಿಂದ ಕೆಳಗಿಳಿಸಿ. ಗಟ್ಟಿ ಅವಲಕ್ಕಿಯನ್ನು ನೀರಿನಲ್ಲಿ 2 ನಿಮಿಷ ನೆನೆಸಿ ತೊಳೆದು. ಸೋರಿಹಾಕಿ. ನೀರು ಬಿಟ್ಟು ಬಿಡಿಬಿಡಿಯಾದ ಅವಲಕ್ಕಿಯನ್ನು ಸಿದ್ದವಾದ ಕೋಳಿಗೊಜ್ಜಿನ ಜೊತೆಗೆ ಹದವಾಗಿ ಕಲಸಿ. ಹೆಚ್ಚು ಕಲಸಿದ್ರೆ ಅವಲಕ್ಕಿ ಮುದ್ದೆಯಾಗತ್ತೆ ಜಾಗ್ರತೆ! ಆಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ.  ಮೊಸರುಬಜ್ಜಿಯ ಜೊತೆಗೆ ಸವಿಯಬಹುದು. 



 

3. ಮೀನು ಮತ್ತು ಮೊಸರನ್ನ  (Fish fry with Curd rice)


ಇದನ್ನು ಕೆಟ್ಟ ಕಾಂಬಿನೇಷನ್ ಅನ್ನುವರು ಉಂಟು.. ಆದರೆ ತಿಂದ ಮೇಲೆ ಹಾಗೆ ಹೇಳುವುದು ಕಷ್ಟಸಾಧ್ಯ 

ತುಂಡುಮಾಡದ  ಒಂದು ಪೂರ್ತಿ ಮೀನು
ಕಾಳು ಮೆಣಸು : 2 ಚಮಚ
ನಿಂಬೆಹಣ್ಣು : ಅರ್ಧ ಹೋಳು
ಮಸಾಲೆಗೆ : ತುರಿದ ತೆಂಗಿನ ಕಾಯಿ – ಒಂದು ಹಿಡಿ
ಕಾಳು ಮೆಣಸು – 7-8 ಕಾಳು
ಒಣಮೆಣಸಿಕಾಯಿ – 3-4 ಎಸಳು
ಜೀರಿಗೆ – ಅರ್ಧ ಚಮಚ
ಬೆಳ್ಳುಳ್ಳಿ –ಬಿಡಿಸಿದ ಮೂರು ಗೆಡ್ಡೆ
ಕೊತ್ತಂಬರಿ ಸೊಪ್ಪು : 4 ಎಸಳು
ಉಪ್ಪು ರುಚಿಗೆ ತಕ್ಕಷ್ಟು  



ಇಷ್ಟನ್ನೂ 5 ಚಮಚದಷ್ಟೂ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು.
ಮಾಡುವ ವಿಧಾನ : ತೊಳೆದ ಪೂರ್ತಿ ಮೀನಿಗೆ ಪುಡಿಯುಪ್ಪು, ಕಾಳು ಮೆಣಸಿನಪುಡಿ, ನಿಂಬೆ ರಸ  ಸವರಿ ಅರ್ಧ ಗಂಟೆ ನೆನೆಸಬೇಕು.
ನಂತರ ಮಸಾಲೆಯನ್ನು ಹಚ್ಚಿ ಒಲೆಯ ಮೇಲೆ ಕಾದ ತವಾ ಅಥವಾ ರೊಟ್ಟಿ ಅಂಚಿಗೆ ಸ್ವಲ್ಪ ಎಣ್ಣೆ ಹಾಕಿ ಮೀನು ಇಟ್ಟು ಎರಡೂ ಬದಿಯಲ್ಲಿ ಸುಡಬೇಕು.
ಗಟ್ಟಿ ಮೊಸರಿನ ಕಲಸಿದ ಅನ್ನಕ್ಕೆ ಸಾಸುವೆ , ಹಸಿರುಮೆಣಸಿಕಾಯಿ, ಕೊತ್ತಂಬರಿ ಸೊಪ್ಪಿನ ಒಗ್ಗರಣೆ ಕೊಡಬೇಕು
ಹದವಾಗಿ ಸುಟ್ಟ ಮೀನನ್ನು  ಮೊಸರನ್ನದ ಜೊತೆ ಸವಿದರೆ ಅದಕ್ಕೆ ಮಿಗಿಲಾದ ಸುಖವಿಲ್ಲ

     



 4. ಸಿಹಿಸೀಗಡಿ ಚಿತ್ರಾನ್ನ : (Freshwater prawns fried with Lemon rice)


ಬಯಲು ಸೀಮೆಯಲ್ಲಿ ಕೆಂಪು ಬಣ್ಣದ ಸಿಹಿನೀರಿನ ಸಿಗದಿಗಳು ಸಿಗುತ್ತವೆ. ಇವು ಸಮುದ್ರದ ಸೀಗಡಿಗಳಂತೆ ದೊಡ್ಡದಾಗಿರುವುದಿಲ್ಲ.
ತುಂಬಾ ಪುಟ್ಟದಾಗಿರುತ್ತವೆ.  ದೇಹಕ್ಕೆ  ಉಷ್ಣತೆ ಹೆಚ್ಚು ಎನ್ನುವ ಕಾರಣಕ್ಕೆ  ಇವನ್ನೂ ಹೆಚ್ಚು ಮಳೆಗಾಲದಲ್ಲಿ ಬಳಸುವುದು ರೂಢಿ.
ಅರ್ಧ ಕೆಜಿ ಅಕ್ಕಿಯಿಂದ ಮಾಡಿದ ಅನ್ನ
ಈರುಳ್ಳಿ : ಒಂದು ಹಿಡಿಯಷ್ಟು
ಟೋಮೊಟೊ : ಒಂದು ಹಿಡಿಯಷ್ಟು
ಹಸಿರು ಮೆಣಸಿನಕಾಯಿ ; ಐದು (ಸಣ್ಣಗೆ ಅಥವಾ ಉದ್ದಕ್ಕೆ ಹಚ್ಚಬೇಕು)
ಕಡಲೇಬೇಳೆ : ಮೂರು ಚಮಚದಷ್ಟೂ ( ಬೇಕಿದ್ದಲ್ಲಿ ಮಾತ್ರ ಬಳಸಬಹುದು )
ಕೊತ್ತಂಬರಿ ಸೊಪ್ಪು : ಅರ್ಧ ಹಿಡಿಯಷ್ಟು
ಗರಂ ಮಸಾಲ : ಒಂದು ಚಮಚ
ಸಣ್ಣ ಸೀಗಡಿ :  ಒಂದು ಹಿಡಿಯಷ್ಟು
ಎಣ್ಣೆ : 50 Ml 



ಮಾಡುವ ವಿಧಾನ : ಬಾಣೆಲೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಅದಕ್ಕೆ ಸಾಸುವೆ, ಈರುಳ್ಳಿ , ಹಸಿರು ಮೆಣಸಿನಕಾಯಿ, ಟೋಮೊಟೊ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಅದಕ್ಕೆ ಗರಂ ಮಸಾಲ ಮತ್ತು ಉಪ್ಪು ಅರಿಶಿನ ಸೇರಿಸಿ ಬಾಡಿಸಿ.
ಸಿದ್ದವಾದ ಅನ್ನದ ಜೊತೆ ಕಲಿಸಿರಿ. 
ನಂಟ ಪ್ರತ್ಯೇಕವಾಗಿ ಸೀಗಡಿಯನ್ನು ಎಣ್ಣೆಯಲ್ಲಿ ಎರಡು ನಿಮಿಷ ಹುರಿದುಕೊಳ್ಳಿ. ಜಾಗ್ರತೆ ಸೀಗಡಿ ಸೀದುದುಹೋಗಬಾರದು.
ಇದನ್ನು ಅನ್ನದ ಜೊತೆಗೆ ಉದುರಿಸಿದರೆ. ಸೀಗಡಿ ಚಿತ್ರಾನ್ನ ಸಿದ್ದ.       

5. ಮೆಣಸುಪ್ಪಿನ ಪಂದಿಕರಿ : (Pork pepper fry) 



ಈ ಹೆಸರು ಮೂಲತಃ ಕೊಡಗಿನದ್ದು. ಕೊಡವರು ಹಂದಿಬಾಡಿಲ್ಲಿ ಮಾಡುವ ಅಡುಗೆಗೆ ಪಂದಿಕರಿ ಎಂದು ಕರೆಯುತ್ತಾರೆ.
ಈವಾಗ ನಾವು ಅದನ್ನು ಆಮದು ಮಾಡಿಕೊಂಡು ಹಂದಿಬಾಡಿನ ಅಡುಗೆಗೆ ಪಂದಿಕರಿ ಅಂತಲೇ ಬಳಸುತ್ತಿದ್ದೇವೆ.
ಹಂದಿ ಮಾಂಸ: ½ ಕೆಜಿ
ಕಾಳು ಮೆಣಸು : 25 ಗ್ರಾಂ ನಷ್ಟು
ಶುಂಠಿ-ಬೆಳ್ಳುಳ್ಳಿ ಮಿಶ್ರಣ ; 25 ಗ್ರಾಂ ನಷ್ಟು
ಹಚ್ಚಿದ ಈರುಳ್ಳಿ : ಒಂದು ಹಿಡಿಯಷ್ಟು
ಹಸಿರು ಮೆಣಸಿನಕಾಯಿ : ಐದು
ಅರಿಶಿನ ಪುಡಿ : 3 ಚಿಟಿಕೆ
ಕೊತ್ತಂಬರಿ ಸೊಪ್ಪು: ಅರ್ಧ ಹಿಡಿ
ಎಣ್ಣೆ : 4 ಚಮಚ
ಉಪ್ಪು :  ರುಚಿಗೆ ತಕ್ಕಷ್ಟು 



ಮಾಡುವ ವಿಧಾನ : ಬಾಣೆಲೆಯಲ್ಲಿ  ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಹಂದಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.  ಮಾಂಸದ ನೀರು ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಕಾಳು ಮೆಣಸಿನ ಪುಡಿ,  ಶುಂಠಿ-ಬೆಳ್ಳುಳ್ಳಿ ಮಿಶ್ರಣ ಹಾಕಿ 200 ml ನಷ್ಟು ನೀರು ಹಾಕಿ ಬೇಯಲು ಬಿಡಿ.ಚೆನ್ನಾಗಿ ನೀರು ಇಂಗಿದ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿ ಬಾಡಿಸಿ   ಮೆಣಸುಪ್ಪಿನ ಪಂದಿಕರಿ ಸಿದ್ದ.  ಅನ್ನ , ಚಪಾತಿ , ರೊಟ್ಟಿ ಯ ಜೊತೆ ತಿನ್ನಲು ಬಲು ಸೊಗಸು.  



6. ಮಸಾಲೆ ಪಂದಿಗೊಜ್ಜು (Spicecy Pork fry )

 

ಹಂದಿ ಮಾಂಸ: ½ ಕೆಜಿ
ಕಾಳು ಮೆಣಸಿನ ಪುಡಿ  : 2 ಚಮಚ
ಶುಂಠಿ-ಬೆಳ್ಳುಳ್ಳಿ ಮಿಶ್ರಣ ; 50 ಗ್ರಾಂ ನಷ್ಟು
ಹಚ್ಚಿದ ಈರುಳ್ಳಿ : ಒಂದು ಹಿಡಿಯಷ್ಟು
ಹಸಿರು ಮೆಣಸಿನಕಾಯಿ : ಐದು
ಗರಂ ಮಸಾಲ ಪುಡಿ : 50 ಗ್ರಾಂ ನಷ್ಟು
ಕೆಂಪು ಮೆಣಸಿನಕಾಯಿ ಪುಡಿ : 2 ಚಮಚ
ಅರಿಶಿನ ಪುಡಿ : 3 ಚಿಟಿಕೆ
ಕೊತ್ತಂಬರಿ ಸೊಪ್ಪು: ಅರ್ಧ ಹಿಡಿ
ಎಣ್ಣೆ : 4 ಚಮಚ
ಉಪ್ಪು :  ರುಚಿಗೆ ತಕ್ಕಷ್ಟು



ಮಾಡುವ ವಿಧಾನ ಬಾಣೆಲೆಯಲ್ಲಿ  ಎಣ್ಣೆಯನ್ನು ಹಾಕಿ ಕಾಯಿಸಿ ಹಚ್ಚಿದ ಈರುಳ್ಳಿ, ಹಸಿರು ಮೆಣಸಿಕಾಯಿ ಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೆಂಪಾದಾಗ ಬಿಸಿನೀರಿನಲ್ಲಿ ತೊಳೆದ ಹಂದಿಮಾಂಸವನ್ನು ಹಾಕಿ ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ.  ಮಾಂಸದ ನೀರು ಬಿಟ್ಟುಕೊಳ್ಳಲು ಶುರುವಾಗುತ್ತದೆ. ನೀರು ಇಂಗುವವರೆಗೂ ಬಾಡಿಸಿ. ನಂತರ ಕಾಳು ಮೆಣಸಿನ ಪುಡಿ,  ಶುಂಠಿ-ಬೆಳ್ಳುಳ್ಳಿ ಮಿಶ್ರಣ, ಗರಂ ಮಸಾಲ ಪುಡಿ, ಕೆಂಪು ಮೆಣಸಿನಕಾಯಿ ಪುಡಿ ಹಾಕಿ ಬಾಡಿಸಿ. 300 ml ನಷ್ಟು ನೀರು ಸೇರಿಸಿ, ಚೆನ್ನಾಗಿ ಬೇಯಿಸಿ. ಗಟ್ಟಿಯಾದ ಹೆಚ್ಚು ಗೊಜ್ಜು ಬೇಕಿದ್ದಲ್ಲಿ ಅರ್ಧ ಹೋಳಿನಷ್ಟು ಅರೆದ  ತೆಂಗಿನಕಾಯಿನ ಮಿಶ್ರಣವನ್ನು ಇಲ್ಲಿ ಸೇರಿಸಿ. ಇಲ್ಲಿ ತಳ ಹಿಡಿಯದಂತೆ ಜಾಗ್ರತೆ ವಹಿಸಬೇಕು. 15- 20 ನಿಮಿಷ ಹದವಾಗಿ ಬೆಂದ ಗೊಜ್ಜನ್ನು ನಿಧಾನಕ್ಕೆ ಒಲೆಯಿಂದ ಕೆಳಗಿಳಿಸಿ  ಕೊತ್ತಂಬರಿ ಸೊಪ್ಪು ಉದುರಿಸಿ.
ಈ ಗೊಜ್ಜನ್ನು ರಾಗಿಮುದ್ದೆಯ ಜೊತೆ ಸವಿಯಲು ಚೆಂದ. ಉಳಿದಂತೆ ಅನ್ನ , ಚಪಾತಿ, ರೊಟ್ಟಿಗೆ ಬಲುಮಜವಾಗಿರತ್ತೆ.      



*ಕನ್ನಡ ಪ್ರಭದಲ್ಲಿ ಪ್ರಕಟಿತ