Friday, June 2, 2017

ಅರ್ಥಶಾಸ್ತ್ರ

ಚಾಣಕ್ಯನ ಬಿಚ್ಚಿದ ಶಿಖೆಯ
ಗುತ್ತಿಗೆ ಪಡೆದಂತೆ ಅರ್ಥಶಾಸ್ತ್ರವ
ಉಸುರುತ್ತಿದ್ದ ಗಿಳಿಗಳು ಮಾಯಾವಾಗಿವೆ.
ನೀವು ಕಾಣಿರೆ ನೀವು ಕಾಣಿರೆ
ಯಾವ ಅಡ್ಡೆಯೊಳಗೆ ಅವಿತು ಹೋದವೆಂದು?
ಬೀಭತ್ಸ ಭಾಷಣಕಾರ ಪ್ರಧಾನಿಗಳು
ಇಂದು ಉಪವಾಸ, ನಾಳೆ ಯೋಗಾಸನ
ನಾಳಿದ್ದಿನಿಂದ ನಲವತ್ತು ದೇಶಪರ್ಯಟನೆ
ದ್ವಿಪಕ್ಷೀಯ ಮಾತುಕತೆಗೆ ಕ್ಯಾಮೆರಾದವರೊಡನೆ!
ಇಲ್ಲಿ ನಿತ್ಯನಾರಕ, ನಿಲ್ಲದ ನರಮೇಧ
ಹರಿದ ಸೆರಗುಗಳೊಳಗೆ ಕರಗಿದ ಹೂಗಳು
ಉಣ್ಣುವ ತಟ್ಟೆಗಳ ತಡಕಾಡುವ ಗೂಂಡಾಗಳು ;
ರದ್ದುಗೊಂಡ ನೋಟುಗಳಲಿ ಮಾಸಿಹೋದ ಕನಸುಗಳು
ನಿಂತುಹೋದ ಕಾರ್ಖಾನೆಗಳು, ಹಸಿವುಗೆಟ್ಟ ಹೊಟ್ಟೆಗಳು
ಒಣಗಿದ ಗದ್ದೆ, ಬದುಕಲಾರದ ಬಡಜೀವಗಳು
ಕಿತ್ತುತಿನ್ನುವ ತೆರಿಗೆಗಳು, ಬ್ಯಾಂಕುಗಳು ಜೊತೆಗೆ
ದೇಶಭಕ್ತಿಯ ಬಂಡಲುಬಡಾಯಿಗಳು.
ಲೆಕ್ಕಬಾರದ, ಗಂಟಲು ಸೇದುಹೋದ ಆ ಗಿಳಿಗಳ
ನೀವು ಕಾಣಿರೆ! ನೀವು ಕಾಣಿರೆ!
ಕಂಡಲ್ಲಿ ಕೊರಳು ಪಟ್ಟಿಯಿಡಿದು ಕೇಳಿರೆ
ಎಲ್ಲಿ ಚಾಣಕ್ಯನ ಅರ್ಥಶಾಸ್ತ್ರ?
ಎಲ್ಲಿ ಚಿನ್ನ ಹೊದಿಸಿದ ಹೆದ್ದಾರಿಗಳು?
ಎಲ್ಲಿ ಹದಿನೈದು ಲಕ್ಷರುಪಾಯಿಗಳು?
ಅಸಲಿಗೆ
ಭಾಷಣಕೋರರ ಮಾತುಸೋತ ಭಾರತದಲಿ
ಅರ್ಥಶಾಸ್ತ್ರವೆಂದರೆ ಎರಡುದ್ದರಣೆ ಗೋಮೂತ್ರ! ~

No comments:

Post a Comment