Wednesday, August 17, 2016

ನಾವೆಲ್ಲರೂ ಒಂದು ಪ್ರಮಾಣ ಮಾಡಬೇಕಿದೆ :


ನೈತಿಕತೆಯನ್ನು ಬಿಟ್ಟು ವ್ಯವಹಾರ ಮತ್ತು ರಾಜಕೀಯಕ್ಕೆ ಇಳಿದಿರುವ ಮಾಧ್ಯಮಗಳ ಒಡೆತನ ಬಹುತೇಕ ಇಂದು ಬಂಡವಾಳಶಾಹಿಗಳು ಮತ್ತು ಪಟ್ಟಭದ್ರ ಹಿತಾಸಕ್ತರ ಕೈಗಳಲ್ಲಿ ಇವೆ. ಇವು ದೇಶಕಾಲಗಳನ್ನು ನೋಡಿಕೊಂಡು ತಮಗೆ ಬೇಕಾದ ಸರಕಾರ / ವ್ಯಕ್ತಿ / ಸಂಸ್ಥೆಗಳ ಪರವಾಗಿ ವಕಾಲತ್ತು ವಹಿಸಿಕೊಳ್ಳುತ್ತವೆ. ಕಾರಣ ಇವುಗಳು ಬದುಕಲು ಬೇಕಾದ ಮೇವು ಸಿಗುವುದೇ ಅಲ್ಲಿಂದ! ಅಲ್ಲದೇ ಇವೆಲ್ಲಾ ಸುದ್ದಿ ಪತ್ರಿಕೆ /ಮಾಧ್ಯಮಗಳು ಬಂಡವಾಳಶಾಹಿಗಳು ಮತ್ತು ಪಟ್ಟಭದ್ರ ಹಿತಾಸಕ್ತರು ತಮ್ಮ ಹಲವಾರು ವ್ಯವಹಾರಗಳನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಸಾಕಿಕೊಂಡಿರುವ ಖಾಸಗಿ ರಕ್ಷಣಾದಳಗಳಾಗಿ ಮಾರ್ಪಟ್ಟಿವೆ. ಇಲ್ಲಿ ನೈತಿಕತೆಯನ್ನು, ಪಾರದರ್ಶಕತೆಯನ್ನು, ಸಾಮಾಜಿಕ ಬದ್ದತೆಯನ್ನು ನಿರೀಕ್ಷಿಸುವುದು ವೃಥಾ ವ್ಯರ್ಥ!
ಕಳೆದ ಎರಡು ದಶಕಗಳಲ್ಲಿ ದೇಶದಲ್ಲಿ ಸಾವಿರಾರು ಸುದ್ದಿ ಪತ್ರಿಕೆಗಳು ಮತ್ತು ನೂರಾರು ಸುದ್ದಿವಾಹಿನಿಗಳು ತಲೆ ಎತ್ತಿವೆ. ಅವುಗಳ ಬಂಡವಾಳ ಎಲ್ಲಿಯದು? ಪ್ರತಿಯೊಂದರ ಹಿಂದೆ ಒಬ್ಬ ರಾಜಕಾರಣಿ ಅಥವಾ ವ್ಯವಹಾರಸ್ಥ ಕಾಣಿಸಿಕೊಳ್ಳುತ್ತಾನೆ. ಹೆಸರಿಗೆ ಮಾತ್ರ ಒಬ್ಬ ಸಂಪಾದಕನಿರುತ್ತಾನೆ. ಆತನೇನಾದರೂ ಇವರ ಆಲೋಚನೆಗಳಿಗೆ ವಿರುದ್ದವಾಗಿ ಕೆಲಸ ಮಾಡಿದರೆ ಆ ದಿನವೇ ಆತ ಕೆಲಸ ಕಳೆದುಕೊಳ್ಳುತ್ತಾನೆ. ಅವರಿಗೆ ಬೇಕಿರುವುದು ಬರಿಯ ಅವರ ಕೆಲಸಗಳಿಗೆ/ ವ್ಯವಹಾರಗಳಿಗೆ ಬೇಕಾದ ಒಬ್ಬ ಸಂಪಾದಕ ಮಾತ್ರ. ಆತನಿಗೆ ಸಾಮಾಜಿಕ ಬದ್ದತೆ ಎಂಬುದರ ಅರಿವು ಕಡ್ಡಾಯವೇನಲ್ಲ! ಮುಖ್ಯವಾಗಿ ಇಲ್ಲಿ ನಾವು ಯೋಚಿಸಿಬೇಕಾದ್ದು ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಬದುಕಲು ಬೇಕಾದಷ್ಟೂ ಹಣ ಅವುಗಳಿಂದ ನಿಜವಾಗಲೂ ಸಂಪಾದನೆಯಾಗುತ್ತಿದೆಯೇ ? ಅಥವಾ ಅವು ಅಡ್ಡದಾರಿಯನ್ನು ತುಳಿದಿವೆಯೇ ಎಂದು?! ಯಾಕೆಂದರೆ ಇವು ನಡೆಯುತ್ತಿರುವುದು ಓದುಗ ನೋಡುಗರು ಕೊಡುವ ಚಂದಾಹಣದಿಂದ ಅಥವಾ ಮುಖಬೆಲೆಯಿಂದ ಅಲ್ಲವೇ ಅಲ್ಲ ಬದಲಿಗೆ ಜಾಹೀರಾತುಗಳಿಂದ. ಆದರೆ ಬರುತ್ತಿರುವ ಜಾಹೀರಾತುಗಳಿಂದ ಮಾತ್ರವೇ ಇವು ತಮ್ಮ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿವೆಯೋ ಅಥವಾ ದಂಡಿಯಾಗಿ ರಾಜಕಾರಣಿಗಳು / ವ್ಯವಹಾರಸ್ಥರು ತಮ್ಮ ಹಣವನ್ನು ಇದಕ್ಕೆ ಹರಿಯಬಿಟ್ಟಿದ್ದಾರೋ ನೋಡಬೇಕು. ಇದೊಂದು ಅನುಮಾನ. ಈ ಕುರಿತು ಯಾರಾದರೂ ತನಿಖೆ ಮಾಡಬೇಕು. ಈ ತನಿಖೆಯು ನಮ್ಮನ್ನು ಬೆಚ್ಚಿಬೀಳಿಸುವ ವರದಿಯನ್ನು ನೀಡುವುದರಲ್ಲಿ ಸಂಶಯವಿಲ್ಲ.
ಈವಾಗ ನಾವು ಮಾಡಬೇಕಿರುವುದಾದರೂ ಏನು ?
ಧಾರಾವಾಹಿ - ಹಾಸ್ಯ ಕಾರ್ಯಕ್ರಮ -ಚಲನಚಿತ್ರಗಳನ್ನು ಪ್ರಸಾರ ಮಾಡುವ ಮನೋರಂಜನೆಯ ಚಾನೆಲ್ ಗಳ ಹೊರತಾಗಿರುವ, ಪಕ್ಷಪಾತಿಯಾಗಿರುವ, ಸಾಮಾಜಿಕ ಬದ್ದತೆಯಿಲ್ಲದ ಸುದ್ದಿವಾಹಿನಿಗಳು, ಪತ್ರಿಕೆಗಳನ್ನು ನಾವು ಬಹಿಷ್ಕರಿಸಬೇಕು. ಅವುಗಳಲ್ಲಿ ನಡೆಯುವ ಕೆಟ್ಟ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು, ಪೋನ್ ಇನ್ ಕಾರ್ಯಕ್ರಮಗಳಲ್ಲಿ ಮಾತನಾಡುವುದು, ನೋಡುವುದು / ಓದುವುದು, ಬರೆಯುವುದು ಇತ್ಯಾದಿ ಬೆಂಬಲಗಳನ್ನು ನಿಲ್ಲಿಸಬೇಕು. ಪದೇ ಪದೇ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಉಮೇದಿನಲ್ಲಿ ಕೆಟ್ಟ ಹೇಳಿಕೆಗಳನ್ನು ಕೊಡುವುದನ್ನ ನಿಲ್ಲಿಸಬೇಕು. ಒಟ್ಟಾರೆ ಇಂತಹ ದುರುಳ ಸುದ್ದಿ ಮಾಧ್ಯಮಗಳನ್ನು ದೂರವಿಟ್ಟು ಸಾಮಾಜಿಕ ನ್ಯಾಯ ಮತ್ತು ಬದ್ದತೆಯುಳ್ಳ ಕೆಲಸಗಳಲ್ಲಿ ನಾವು ಮಗ್ನರಾಗಬೇಕು. ಅಂತಹ ಕೆಲಸಗಳನ್ನು ಮತ್ತಷ್ಟು ಜನ ಮಾಡುವಂತೆ ಪ್ರೇರೇಪಿಸಬೇಕು. ( ಈ ನಿಟ್ಟಿನಲ್ಲಿ ನೀಲಾ ಮೇಡಂ ಅವರು ಗುಲ್ಬರ್ಗದಲ್ಲಿ ಕೆರೆಗಳ ನಿರ್ಮಾಣದಂತಹ ಕೆಲಸವನ್ನು ಯಾವ ಪ್ರಚಾರವೂ ಇಲ್ಲದೆ ನಿರಂತರವಾಗಿ ನಡೆಸಿಕೊಂಡು ಬರ್ತಾ ಇದಾರೆ. ಇದು ಗ್ರಾಮೀಣ ಜನರಿಗೆ ಉದ್ಯೋಗ ಮತ್ತು ಕೃಷಿ/ ಕುಡಿಯುವ ನೀರು ಒದಗಿಸುತ್ತಾ ಇದೆ)
ಕೃಷಿ / ಉದ್ಯೋಗ / ಪರಿಸರ ಸಂರಕ್ಷಣೆ/ ಎಲ್ಲದರಲ್ಲೂ ಎಲ್ಲ ಜಾತಿ ಧರ್ಮದ ಜನರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನವನ್ನು ಕಲ್ಪಿಸುತ್ತ ಮುಂದೆ ಸಾಗಬೇಕಿದೆ. ಆವಾಗ ಈ ವ್ಯವಹಾರಸ್ಥ ಸುದ್ದಿ ಮಾಧ್ಯಮಗಳು ತಾವಾಗಿಯೇ ನಶಿಸಿ, ಸಾಮಾಜಿಕ ಬದ್ದತೆಯುಳ್ಳ ಮಾಧ್ಯಮಗಳು ನಮ್ಮ ನಡುವೆ ಉಳಿದುಕೊಳ್ಳುತ್ತವೆ.
ಈಗಲೇ ಪ್ರಮಾಣ ಮಾಡಿ '' ಪಕ್ಷಪಾತಿಯಾಗಿರುವ, ಸಾಮಾಜಿಕ ಬದ್ದತೆಯಿಲ್ಲದ ಸುದ್ದಿವಾಹಿನಿಗಳು, ಪತ್ರಿಕೆಗಳ ಓದು-ಬರಹ-ಪಾಲ್ಗೊಳ್ಳುವಿಕೆಯಿಂದ ದೂರವಾಗೋಣ ''

2 comments:

  1. ಉತ್ತಮ ವಿಚಾರಗಳು. ನೀಲಾ ಮೇಡಮ್ ಯಾರು, ಅವರು ಕಲಬುರ್ಗಿಯಲ್ಲಿ ಏನೇನು ಮಾಡುತ್ತಿದ್ದಾರೆ? ಸ್ವಲ್ಪ ಹೆಚ್ಚಿಗೆ ತಿಳಿಸುತ್ತೀರಾ?

    ReplyDelete
    Replies
    1. ಸರ್ , ನೀವು ಫೇಸ್ಬುಕ್ ನಲ್ಲಿ ಇದ್ದಲ್ಲಿ ಈ ಪ್ರೊಫೈಲ್ ಅನ್ನು ಚೆಕ್ ಮಾಡಿ. ನೀಲಾ ಅವರ ವಿವರಗಳು ತಿಳಿಯುತ್ತವೆ https://www.facebook.com/neelak.gulbarga?fref=ts

      Delete