Friday, September 13, 2013

ಕಟ್ಟುಕಥೆಗಳು +1

ಬೆಳಿಗ್ಗೆಯಷ್ಟೇ ಕಾವ್ಯ ಬರೆವುದ ಕಲಿಸಿ ಎಂದು ಕೇಳಿದ್ದ ಶಿಷ್ಯನಿಗೆ
ಇಂಕು ಖಾಲಿಯಾದ ಪೆನ್ನು ಕೈಗಿತ್ತು ಗುರು ಹೊರನಡೆದ.
ಶಿಷ್ಯ ಗಲಿಬಿಲಿಯಿಂದ ನೋಡುತ್ತಾ ಇದ್ದ. ಒಂದಷ್ಟು ದೂರ ನಡೆದು ಅರಳಿದ ಹೂ ನೋಡುತ್ತಾ
'ಮೊದಲು ಒಳಗೆ ಇಂಕು ತುಂಬಿಕೊ.. ಪೆನ್ನು ಬರೆಯುತ್ತದೆ' ಎಂದರು, ಪ್ರಜ್ಞಾಪರಿಮಿತರು.

>>RP ಕಟ್ಟುಕಥೆಗಳು +1

ಮನಸ್ಸೇಕೋ ವ್ಯಾಕುಲ

ದಾಜ಼ು ಹುಇಕೆ ತನ್ನ ಗುರು ಬೋಧಿಧರ್ಮರಲ್ಲಿ ' ನನ್ನ ಮನಸ್ಸೇಕೋ ವ್ಯಾಕುಲಗೊಂಡಿದೆ .. ತಿಳಿಗೊಳಿಸುವಿರ ?' ಎಂದು ಕೇಳಿಕೊಂಡ
ಅದಕ್ಕೆ ಬೋಧಿಧರ್ಮ 'ಎಲ್ಲಿ ನಿನ್ನ ಮನಸ್ಸನ್ನು ಕೊಡು.. ತಿಳಿಗೊಳಿಸುವೆ' ಎಂದರು.
ಹುಇಕೆ ನಿರ್ಲಿಪ್ತನಾಗಿ 'ನಾನೂ ಹುಡುಕಿದೆ .. ಆದ್ರೆ ಸಿಗಲೇ ಇಲ್ಲ' ಎಂದ.
'ನೋಡಿದ .. ನಾನದನಾಗಲೇ ತಿಳಿಗೊಳಿಸಿರುವೆ' ಎಂದರು ಬೋಧಿಧರ್ಮ!

~ ಕೋನ್ ಪ್ರಸಂಗಗಳು >> ಆರ್.ಪಿ. -1

ಪ್ರವಾದಿಗಳ ದೇವ ರಹದಾರಿ -1



ನಿದ್ದೆಯಲ್ಲ .. ಎಚ್ಚರವಲ್ಲ
ಅಮಲಂತೂ ಅಲ್ಲವೇ ಅಲ್ಲ
ಅಲ್ಲಾಹುವಿನ ಆಜ್ಞೆತಂದವರು
ಸೀಳಿದರು ಗಂಟಲಿಂದ
ಗುಹ್ಯದವರೆಗೆ..
ಇನಿತು ರಕ್ತ ಹರಿಯಲ್ಲಿಲ್ಲ
ಪ್ರಭುವೇ ನಿನ್ನ ಕರುಣೆ
ಎಲ್ಲ ಮಾಯೆ ಎಲ್ಲ ಬಂಧ
ತೊಳೆದ ಜಮ್ ಜಮ್*
ಜಲದ ಬೆಳಕು, ಎದೆಯ
ತುಂಬಿತು ಅರಿವು, ನಂಬಿಕೆಯ
ಹೊನಲು..
ಅಬ್ಬಬ್ಬಾ ದೊರೆಯೇ ಅದೆಂತು
ಸಹಿಸಿದೆಯೋ ಲೋಕದ ನೋವ!

ಜೆರುಸಲೇಂ ಕರೆಯುತ್ತಿದೆ ನಿನ್ನ
ದೇವರ ವಾಕ್ಯ ವರದಿಮಾಡಲು
ಈ ನಾಡಿನ ತುಂಬಾ..
ಹೊರಡು ದೊರೆಯೇ ಆಲ್ಬಾರಕ್ ಕಾದಿದೆ
ಹೊರಡು ದೊರೆಯೇ ದೇವದೂತ ಗೇಬ್ರಿಯಲ್
ಕಾದಿದ್ದಾನೆ...
ಹೊರಡು ಜಗತ್ತು ನಿನ್ನವಾಕ್ಯಕ್ಕೆ ಕಾದಿದೆ.

~ ಆರ್.ಪಿ. >> ಜೆರುಸಲೇಂ ಕವಿತೆಗಳು

*ಜಮ್ ಜಮ್ = ಮೆಕ್ಕಾದಲ್ಲಿ ಸಿಗುವ ಪವಿತ್ರ ತೀರ್ಥ
ಈ ರಾತ್ರಿ ಕಡುಕಪ್ಪು
ಕತ್ತಲಿನಲಿ ನಿನ್ನ ಏಕಾಂತದ
ಉತ್ತುಂಗಕ್ಕೇರಲೇಬೇಕು, ಪಿಸುಗುಟ್ಟಿದಳು
ಮತ್ತು ಇದೀಗ ಹಲವು ಸುತ್ತಿನ
ಅಭ್ಯಾಸ ನಡೆಯುತ್ತಿದೆ
ಮುಚ್ಚಿದ ಕಣ್ಣುಗಳಲಿ. - ಗಾಥಾ ಸಪ್ತಶತಿ 249
ಜಗದ ಕಣ್ಣಿನ ಉದ್ದಗಲಕ್ಕೂ
ತುಂಬಿಕೊಂಡ ಚೆಂದದ ಹೆಣ್ಣುಗಳು.
ಸೌಂದರ್ಯ ಪ್ರವಾಹದ
ಅವಳ ಎಡಭಾಗವನ್ನು
ಅವಳ ಬಲಭಾಗಕ್ಕಷ್ಟೇsss
ಹೋಲಿಸಬಹುದು! ~  ಗಾಥಾ ಸಪ್ತಶತಿ 303

ಎರಡೇ ದಾರಿ


ಕಲ್ಯಾಣದ ಮಹಾಮನೆಯಲ್ಲಿ
ಇದ್ದವರೆಲ್ಲಾ ಶರಣರಲ್ಲ ಕಾಣಾ
ಲಿಂಗ ಕಟ್ಟಿದವರೆಲ್ಲಾ ಜಂಗಮರಲ್ಲ

ಅನುಭವ ಮಂಟಪದಲ್ಲಿ
ಅದೆಷ್ಟೋ ಕೊಳೆತ ಮೆದುಳಿನ
ಕಲ್ಲುಗಳು ಲಿಂಗವೆನಿಸಿದ್ದವೋ?!

ಮುಖಕ್ಕೆ ಅಂಟಿಸಿಕೊಂಡ
ಬಣ್ಣಗಳ ತೊಳೆಯದ ಹೊರತು
ಅನೃತದ ಅಲಂಕಾರಗಳ
ಕಳಚದ ಹೊರತು
ನಿನ್ನ ಒಳಗೆ ಬರಗೊಡುವುದಿಲ್ಲ

ಕಾಮನಬಿಲ್ಲಿಗೆ ಜಗಸೂರೆಗೊಳ್ಳಬಹುದು
ಮೋಸಹೋಗಬಹುದು
ಆಕಾಶದ ಕುಲಕ್ಕೆ ಯಾವ ಬಣ್ಣವೂ ಇಲ್ಲ

ಹೋಗು
ಸಿಕ್ಕುವುದು ಎರಡೇ ದಾರಿ
ಅಹಂಕಾರಕ್ಕೆ ಬಾಗಿಲುಂಟು
ಒಲವೆಂಬುದು ಬಟಾಬಯಲು ~

ಗೌರಿಯರ ದುಃಖ



ಬರಿಗೊರಳ ತುಂಬು ಸೆರಗಿನಿಂದ
ಹೊದ್ದುಕೊಂಡು
ಬರಿಗಾಲಲ್ಲಿ ತವರಿಗೆ
ಹೊರಟಳು ಅವ್ವ..
ಸೆರಗ ತುದಿಯಲ್ಲಿ
ಎರಡು ಹರಿದ ನೋಟಿನ
ಗಂಟು..

ಮಗಳ ಕಂಡ ಹಳೇಮುದುಕಿ
ಕಾಣದ ಕಣ್ಣು
ಚಡಪಡಿಸುತ್ತದೆ
ಮುಖ, ಮೈ ಮುಟ್ಟಿ ಮುಟ್ಟಿ
ಉಸಿರುಯ್ಯುತ್ತದೆ

ಗಂಜಿ, ಪಾಯಸ
ಹಬ್ಬದೂಟ.. ಹೊತ್ತು ಬೀಳುವ
ತನಕ ಒಂದೇ ಸಮ ಮಾತು
ಮುಗಿಸಿ ತಿರುಗಿ ಹೊರಟಾಗ

ಕಾಣದಂತೆ ತನ್ನವ್ವನ ಎಲೆಯಡಿಕೆ
ಚೀಲಕ್ಕೆ ಹರಿದ ನೋಟು ಸೇರಿಸುತ್ತಾಳೆ
ಅವಳವ್ವ ಅದಾಗಲೇ ಇವಳ ಬ್ಯಾಗಿನಲಿ
ಬೆಳ್ಳಿ ಕಾಲಂದಿಗೆ ಮುಚ್ಚಿಟ್ಟಿದಾಳೆ..

ಕಣ್ಣೀರಲಿ ತೊಯ್ದ
ಹರಿದೆರಡು ಸೆರಗುಗಳು
ಮುಂದಿನ ಗೌರಿಗೆ ಈ ಊರು ಕರೆಯುತ್ತೋ
ಇಲ್ಲವೋ ಅಂತಾನೆ ಮೌನಕ್ಕೆ ತುತ್ತಾಗುತ್ತವೆ. ~ ಆರ್.ಪಿ.