Friday, September 13, 2013

ಎರಡೇ ದಾರಿ


ಕಲ್ಯಾಣದ ಮಹಾಮನೆಯಲ್ಲಿ
ಇದ್ದವರೆಲ್ಲಾ ಶರಣರಲ್ಲ ಕಾಣಾ
ಲಿಂಗ ಕಟ್ಟಿದವರೆಲ್ಲಾ ಜಂಗಮರಲ್ಲ

ಅನುಭವ ಮಂಟಪದಲ್ಲಿ
ಅದೆಷ್ಟೋ ಕೊಳೆತ ಮೆದುಳಿನ
ಕಲ್ಲುಗಳು ಲಿಂಗವೆನಿಸಿದ್ದವೋ?!

ಮುಖಕ್ಕೆ ಅಂಟಿಸಿಕೊಂಡ
ಬಣ್ಣಗಳ ತೊಳೆಯದ ಹೊರತು
ಅನೃತದ ಅಲಂಕಾರಗಳ
ಕಳಚದ ಹೊರತು
ನಿನ್ನ ಒಳಗೆ ಬರಗೊಡುವುದಿಲ್ಲ

ಕಾಮನಬಿಲ್ಲಿಗೆ ಜಗಸೂರೆಗೊಳ್ಳಬಹುದು
ಮೋಸಹೋಗಬಹುದು
ಆಕಾಶದ ಕುಲಕ್ಕೆ ಯಾವ ಬಣ್ಣವೂ ಇಲ್ಲ

ಹೋಗು
ಸಿಕ್ಕುವುದು ಎರಡೇ ದಾರಿ
ಅಹಂಕಾರಕ್ಕೆ ಬಾಗಿಲುಂಟು
ಒಲವೆಂಬುದು ಬಟಾಬಯಲು ~

No comments:

Post a Comment