Friday, August 23, 2013

ಭವದ ಬಾಗಿಲ ಅಗುಳಿ



1.     ಹೊತ್ತಿಗೆಗಳಲಿ ಹೊತ್ತು ಕಳೆಯುವಂತಿಲ್ಲ
ಗ್ರಹಣದ ಮೇಲೆ ಗ್ರಹಣ
ಬಯಲು ನಿಲುವಂತಿಲ್ಲ
ಕಣ್ಣು ಕಾಣುವಂತಿಲ್ಲ
ಧೃತರಾಷ್ಟ್ರನ ಸಂತತಿ ಈಗ ಕೋಟಿ ಕೋಟಿ.

ಎಲ್ಲರ ಕೈಲು ಪಗಡೆ ಕಾಯಿಗಳು
ಹಣ್ಣು ಮಾಡುವ ತವಕ
ಬಿಡದಲ್ಲ ಮೋಹ, ಗದ್ದುಗೆಯ ದಾಹ
ತೀರದಲ್ಲ.

ಬಂದರು ಹೋದರು
ಅದೇ ಸೂರ್ಯ, ಅದೇ ಚಂದ್ರ
ಹೊಸಬನ ಬರುವು ಕೂಡಲೇ ಇಲ್ಲ
ಇವರ ಊಳಿಗ ಮುಗಿಯುತ್ತಿಲ್ಲ.
ಜಗದ ಜೀತಕ್ಕೆ ಜಾಮೀನು ಕೊಡುವ
ಜಹಗೀರುದಾರ ಇಲ್ಲವೇ ಇಲ್ಲ!

ಕ್ರಾಂತಿರಾಗಗಳು ವಾಂತಿ ಮಾಡಿಕೊಂಡವು
ಕುಡಿದ ವಿಷವ ಇನ್ನೂ ಕಕ್ಕುತ್ತಲಿವೆ
ಕೆಲವರು
ಕಾಡಿನಲ್ಲಿ ಕೋವಿ ಹಿಡಿದರು
ಹಲವರು
ಊರಿನಲ್ಲಿ ಅಲಗು ಮಸೆದರು..

ಯುದ್ದ ಸನ್ನದ್ದವಾಗುತ್ತಿದೆ
ಅಯ್ಯಾ
ಎದೆಯೊಳಗೆ ಮರೆತು ಮಲಗಿರುವ ಶರಣರೆಲ್ಲ
ದಂಡೆತ್ತಿ ಬರಬೇಕು
ಭವದ ಬಾಗಿಲ ಅಗುಳಿ ಕಳಚಬೇಕು

ರೆಕ್ಕೆಗಳು ಸಿದ್ದವಿರಲಿ, ಹಾರುವ ಹೊತ್ತು ಸನಿಹದಲ್ಲೇ..

No comments:

Post a Comment