Friday, September 13, 2013

ಖಾಲಿತನ

ನಾಡಿನ ತುಂಬೆಲ್ಲಾ ಭಾರತದಿಂದ ಬಂದಿರುವ ಬೋಧಿಧರ್ಮ ಸಂನ್ಯಾಸಿಯ ಗುಲ್ಲೋ ಗುಲ್ಲು.
ಇದು ಗುರು ಹುಂಗ್ ಚಿ ಅವರ ಕಿವಿಗೂ ಬಿತ್ತು.. ಶೊಲಿನ್* ನ ಅಂಗಳಕ್ಕೆ ಬಂದವರೇ ಬೋಧಿಧರ್ಮರನ್ನು
'ನನಗೆ ಬೌದ್ದ ಧರ್ಮ ಕುರಿತು ಪಾಠ ಹೇಳಿರೆಂದು' ಕೇಳಿಕೊಂಡು ತಮಗೆ ತಿಳಿದುದ ಹೇಳತೊಡಗಿದರು
'ಮನಸು, ಬುದ್ದ, ಸಕಲ ಜೀವ-ಜಂತುಗಳು - ಈ ಮೂರೂ ವಾಸ್ತವಗಳಲ್ಲ
ವಾಸ್ತವ ಅನ್ನೋದು ಕೂಡ ಖಾಲಿ.. ಯಾವ ಪರಿಧಿಯಿಲ್ಲ, ಕೊನೆಯಿಲ್ಲ.. ಎಲ್ಲವೂ ಖಾಲಿತನದಿಂದ ಕೂಡಿಲ್ಲವೇ? '
ಎಂದು ಮಾತು ಮುಂದುವರಿಸುತ್ತಲೇ ಇದ್ದಾಗ ಥಟ್ಟನೆ ಬೋಧಿಧರ್ಮರು ಹುನ್ಗ್ ಚಿಯ ತಲೆಗೆ ಕುಟುಕಿದರು.
ಹುನ್ಗ್ ಚಿ ನೋವಿನಿಂದ 'ಯಾಕೆ ಹೊಡೆದಿದ್ದು ?' ಎಂದು ಪ್ರಶ್ನಿಸಿದರು.
ಆಗ ಬೋಧಿಧರ್ಮರು ''ಎಲ್ಲವೂ ಖಾಲಿ ಇದ್ದ ಮೇಲೆ ಈ ನೋವು ಎಲ್ಲಿಂದ ಬಂತು ?
ಕಾಣಲಾಗದ್ದನ್ನು ಕಾಣು
ಕೇಳದಿರುವುದನ್ನು ಕೇಳು
ತಿಳಿಯದಿರುವುದನು ತಿಳಿ
ಅದೇ ನಿಜವಾದ ಸತ್ಯ '' ಎಂದು ಅಲ್ಲಿಂದ ಎದ್ದು ಹೊರಟರು.
ಸುತ್ತಲೂ ಇದ್ದ ಅವರ ಶಿಷ್ಯಂದಿರು ಕೋಪಗೊಂಡು ಹಲ್ಲೆಗೆ ಯತ್ನಿಸಿದಾಗ ಅವರನ್ನು ತಡೆದ ಹುನ್ಗ್ ಚಿ 'ಪದಗಳು ನನ್ನ ಮನಸ್ಸಿನಲಿರುವುದನು ಹೇಳಲಾರವು ಹೃದಯದಿಂದ ಅರ್ಥಮಾಡಿಕೊಳ್ಳಲು ಯತ್ನಿಸಿ' ಎಂದು ಹೇಳಿ ಬೋಧಿಧರ್ಮ ಹೋದ ಹಾಡಿಗೆ ಅಡ್ಡ ಬಿದ್ದರು.

ಶೊಲಿನ್ = ಚೀನಾದ ಬೌದ್ದ ದೇವಾಲಯ & ವಿದ್ಯಾಲಯಗಳ ಪಾರಿಭಾಷಿಕ ಪದ

~ ಕೋನ್ ಪ್ರಸಂಗಗಳು >> ಆರ್.ಪಿ. -2

No comments:

Post a Comment