Friday, August 7, 2015

ನಿಷೇಧ ಸಂಸ್ಕೃತಿ ಮತ್ತು ಜನ ಸರ್ಕಾರ

"ತೆರಿಗೆ ಅತಿಯಾಗಿ ಬಿಟ್ಟರೆ
ಜನ ಕದಿಯುತ್ತಾರೆ.
ಎಲ್ಲದರಲ್ಲಿ ಸರ್ಕಾರ ತಲೆ ಹಾಕಿದರೆ
ಸ್ಥೈರ್ಯ ಕಳೆದುಕೊಳ್ಳುತ್ತಾರೆ.

ಜನರ ಒಳಿತಿಗಾಗಿ ದುಡಿ
ಅವರನ್ನು ನಂಬು"
                 ~ ಲಾವೋತ್ಸೆ ,  ’ದಾವ್ ದ ಜಿಂಗ್ ’

 ಈಚೆಗೆ ಸರ್ಕಾರಗಳು ಜನಸಾಮಾನ್ಯರ ಬದುಕಿನ ಎಲ್ಲಂದರಲ್ಲಿ ತಲೆಹಾಕಲು ಶುರುಮಾಡಿವೆ. ಮನುಷ್ಯನ ಇಡೀ ಬದುಕಿನ ಆಗುಹೋಗುಗಳನ್ನು ಹೀಗೆಯೇ ಇರಬೇಕು, ಇದಿರಬಾರದು ; ಯಾವುದನ್ನ ತಿನ್ನಬೇಕು , ಯಾವ ತರಹದ ಬಟ್ಟೆ ಹಾಕಬೇಕು, ಯಾವುದನ್ನ ಓದಬೇಕು ಎಂದು ಕಟ್ಟಪ್ಪಣೆ ಮಾಡಲು ತೊಡಗಿವೆ.  ಯಾವ ನೈತಿಕತೆ ಜನ ಸಾಮಾನ್ಯರ ಬದುಕಿನೊಳಗೆ ಹಾಸುಹೊಕ್ಕಾಗಿ ಬೆಳೆದು ನಿಂತಿದೆಯೋ ಅದನ್ನು ಒಂದು ಆಲೋಚನಾ ಪರವಾಗಿ ನಿಂತು ಕೃತಕವಾಗಿ ಸೃಷ್ಟಿಸುವ ಕಾರ್ಯಕ್ಕೆ ಕೈಹಾಕಿವೆ. ಇದೆಲ್ಲರದರ ನಡುವೆ ಜನ ಇನ್ನೂ ಸ್ಥೈರ್ಯ ಕಳೆದುಕೊಂಡಿಲ್ಲ. ಅವರು ಕಳೆದುಕೊಂಡಾಗ ಏನಾಗುತ್ತದೆ ಎಂಬುದಕ್ಕೆ ಇತಿಹಾಸದಲ್ಲಿ ಬೇಕಾದಷ್ಟೂ ಉದಾಹರಣೆಗಳು ಸಿಗುತ್ತವೆ!

ಪ್ರಸ್ತುತ ಕೇಂದ್ರ ಸರ್ಕಾರ ಭಾಳಷ್ಟು ಪೋರ್ನ್ ಸೈಟ್ ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಅದರ ಸಂಖ್ಯೆ ಹತ್ತತ್ತಿರ 857 ಎಂಬುವ ಅಂಕಿಯಂಶಗಳನ್ನೂ ಸಹ ಬಿಡುಗಡೆ ಮಾಡುವುದರೊಂದಿಗೆ ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವುದಕ್ಕಾಗಿಯೇ ಈ ನಿಷೇಧವನ್ನು ತರಲಾಗಿದೆಯೆಂದು ಹೇಳಿದೆ.  ಆದರೆ ಸುಪ್ರೀಂಕೋರ್ಟ್ 'ವಯಸ್ಕ ವ್ಯಕ್ತಿ ತನ್ನ ಖಾಸಗಿ ಕೋಣೆಯಲ್ಲಿ ಪೋರ್ನ್ ವೆಬ್ ಸೈಟ್ ಗಳ ವೀಕ್ಷಣೆಯನ್ನು ನಿಷೇಧಿಸುವುದು ಸಂವಿಧಾನ 21 ನೇ ಪರಿಚ್ಛೇಧದಲ್ಲಿ ಉಲ್ಲೇಖಿತ ''ವ್ಯಕ್ತಿ ಸ್ವಾತಂತ್ರ್ಯ''ದ  ಉಲ್ಲಂಘನೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟಿದೆ.(ವರದಿ)  ಅಸಲಿಗೆ ಸುಪ್ರೀಂ ಕೋರ್ಟ್ ನ ಕಾಳಜಿ ಇದ್ದದ್ದು ಮಕ್ಕಳನ್ನು
ಪೋರ್ನೋಗ್ರಫಿ ಬಳಸಿಕೊಳ್ಳುತ್ತಿರುವುದನ್ನು ತಡೆಗಟ್ಟುವ ಬಗ್ಗೆ. ಹಾಗಾಗಿ ಈ ಬಗ್ಗೆ ಸರಕಾರ ಕಠಿಣಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಆದರೆ ತನ್ನ ಮೂಲಭೂತವಾದಿ ಅಜೆಂಡಾಗಳನ್ನು ಜಾರಿಗೆ ತರಲು ಸದಾ ಹವಣಿಸುವ ಸರ್ಕಾರ ಏಕಾಏಕಿ 857 ವೆಬ್ ತಾಣಗಳ ಮೇಲೆ ನಿರ್ಬಂಧ ಹೇರಿತು. ಯಾವಾಗ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ವಿರೋಧ ಹೆಚ್ಚಾಯಿತೋ ಇದನ್ನು ನ್ಯಾಯಾಲಯದ ನಿರ್ದೇಶನ ಎಂತಲೂ ಮತ್ತು ತಾತ್ಕಾಲಿಕ ನಿರ್ಬಂಧ ಎಂತಲೂ ಹೇಳಿ ನುಣುಚಿಕೊಂಡಿತು. 

     ಇಷ್ಟು ದಿನಗಳವರೆಗೂ ಇಲ್ಲದ ರಾದ್ಧಾಂತ ಈವಾಗ ಎಲ್ಲಿಂದ ಹುಟ್ಟಿಕೊಂಡಿತು? ಮತ್ತು ಇಂಥ ತಾಣಗಳ ನಿಷೇಧಕ್ಕಿಂತಲೂ ಮಾಡಲೂ ಇನ್ನೂ ಬೇಕಾದಷ್ಟೂ ಕೆಲಸಗಳು ಇರುವಾಗ ಇವೆಲ್ಲಾ ಯಾಕೆ ಹುಟ್ಟಿಕೊಳ್ಳುತ್ತಿವೆ? ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೂ ಸಾಕು ಇದೆಲ್ಲವೂ ಯಾವುದೋ ಒಂದು ಸಿದ್ದಾಂತ ಪ್ರೇರಿತ ನೈತಿಕತೆಯನ್ನು ಪ್ರತಿಬಿಂಬಿಸುವ ಸಲುವಾಗಿ  ನಡೆಯತ್ತಿರುವ ಪ್ರಹಸನಗಳು ಎಂದು ಗೊತ್ತಾಗಿಬಿಡುತ್ತದೆ. ಮಕ್ಕಳನ್ನು ಪೋರ್ನೋಗ್ರಫಿ ಬಳಸಿಕೊಳ್ಳುತ್ತಿರುವುದು ಮತ್ತು ಮಾನವ ಕಳ್ಳಸಾಗಾಣಿಕೆಯು ಪೋರ್ನೋಗ್ರಫಿ ಸಲುವಾಗೇ ನಡೆಯುತ್ತಿದೆ ಎಂಬ ವಾದದೊಂದಿಗೆ ಇದನ್ನು ನಿಷೇಧ ಮಾಡಬೇಕು ಎನ್ನಲಾಗುತ್ತಿದೆ. ಹಾಗಿದ್ದರೆ ಪೋರ್ನೋಗ್ರಫಿಗೆ ನಿರ್ಬಂಧ ಹೇರಿದರೆ ಇದೆಲ್ಲವೂ ಸರಿಯಾಗಿ ಬಿಡುತ್ತದೆಯೇ? ಇಲ್ಲ! ಯಾಕಂದ್ರೆ ಇದೆಲ್ಲಾ ತುಂಬಾ ಹಿಂದಿನಿಂದಲೂ ಸಮಸ್ಯೆಗಳು. ಇಲ್ಲಿ ವೃಂದಾವನ ವಿಧವೆಯರು ನೆನಪಾಗುತ್ತಾರೆ. ಅವರನ್ನು ಲೈಂಗಿಕ ಶೋಷಣೆಗೆ ಒಳಪಡಿಸಿದ್ದು ಯಾರು? ಹೇಗೆ? ಏಕೆ? ಇದಕ್ಕೆ ಪೋರ್ನೋಗ್ರಫಿ ಕಾರಣ ಎನ್ನುತ್ತೀರೇನು?! (ವರದಿ ) ಮತ್ತೊಮ್ಮೆ ಈ ಕುರಿತು ಮಾತಾನಾಡುವೆ.  
ನಾವು ಗಮನಿಸಬೇಕಾದ್ದು ಸರ್ಕಾರಗಳು ಇಂತಹ ಸಮಸ್ಯೆಗಳನ್ನು ಪರಿಹರಿಸುವ ಬದಲು ಮತ್ತಷ್ಟು ಜಟಿಲಗೊಳಿಸಿ ವಿವಾದಗಳಲ್ಲೇ ಪ್ರಚಾರ ಗಿಟ್ಟಿಸಿಕೊಂಡು ತಮ್ಮ ಅವಧಿ ಮುಗಿಸಿಕೊಳ್ಳುತ್ತವೆ ಅಥವಾ ಮತ್ತೊಂದು ಅವಧಿಗೆ ಚುನಾಯಿತರಾಗುತ್ತವೆ ಎಂಬುದನ್ನ.  

 ನಮ್ಮ ಜೀವನಕ್ಕೆ  ಪೋರ್ನ್ ಸೈಟ್ ಗಳ ಅವಶ್ಯಕತೆ ಇದೆಯೇ ಎಂದರೆ ನಾವು ತಬ್ಬಿಬ್ಬಾಗುವುದು ಸಹಜ.  ತುಂಬಾ ಮುಜುಗರವನ್ನು ತರುವ ಪ್ರಶ್ನೆ ಕೂಡ. ಯಾಕಂದ್ರೆ ಲೈಂಗಿಕ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಭಾರತೀಯ ಸಮಾಜದಲ್ಲಿ ಮಾತನಾಡುವುದು ಮತ್ತು ಅಭಿಪ್ರಾಯ ಹಂಚಿಕೊಳ್ಳುವುದು ತೀರ ಅಪರೂಪ. ಆದೇನಿದ್ದರೂ ಪಿಸುಪಿಸು ಮಾತಿನಲ್ಲೇ ನಡೆದುಹೋಗುತ್ತದೆ. ಆದರೆ ವಿಚಾರವೇ ಇಲ್ಲವೆಂದಲ್ಲ! ಗುಪ್ತವಾಗಿದೆಯಷ್ಟೇ. 
ಲೈಂಗಿಕ ಶಿಕ್ಷಣದಂತ ಸೂಕ್ಷ್ಮ ಕಲಿಕೆಗಳನ್ನು ಪರಿಸರದ ಜೊತೆಗೆ ಆಯಾ ಪ್ರಾದೇಶಿಕ ಜನ ಸಂಸ್ಕೃತಿಗಳು ಲಗಾಯ್ತಿನಿಂದಿಲೂ ಹೊಂದಿವೆ. ಮತ್ತು ’ಲೈಂಗಿಕತೆ ’ ಎನ್ನುವುದು ಉಪಖಂಡ ಬಹುತೇಕ ಎಲ್ಲ ಸಂಸ್ಕೃತಿಗಳಲ್ಲೂ ನಾನಾ ರೂಪಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವುದೇ ಸಾಕ್ಷಿ.  ಇಪ್ಪತ್ತಕ್ಕೂ ಹೆಚ್ಚು ಜನ ವಿದ್ವಾಂಸರು ನೂರಾರು ವರ್ಷಗಳ ಅವಧಿಯಲ್ಲಿ ಬರೆದ ಕಾಮಶಾಸ್ತ್ರ ( ಕಾಮಸೂತ್ರ ಇದರ ಒಂದು ಕೃತಿ ಅಷ್ಟೇ ) ಸಾವಿರಾರು ದೇವಳಗಳಲ್ಲಿ ಮೂಡಿಬಂದಿರುವ ಮಿಥುನ ಶಿಲ್ಪಗಳು, ಮಹಾಭಾರತಾದಿಯಾಗಿ ಪುರಾಣ -ಪುಣ್ಯಕತೆಗಳಲ್ಲಿನ ಸುರತ ಪ್ರಸಂಗಗಳು  ಇತ್ಯಾದಿ . ನಿಷೇಧ /ನಾಶ ಮಾಡುವುದೇ ಆಗಿದ್ದರೆ ಇಂತಹ ಎಲ್ಲಾ ರೂಪಗಳನ್ನು ನಾವು ನಾಶ ಮಾಡಬೇಕಾಗುತ್ತದೆ. ಯಾಕಂದರೆ ಇವೆಲ್ಲವೂ ಭಾಗಶಃ ಪೋರ್ನೋಗ್ರಫಿಯ ಅಂಶಗಳಿಂದ ಕೂಡಿವೆ. ಆದರೆ ಅಂತಹ ಸ್ಥಿತಿ ಖಂಡಿತ ಈ ದೇಶಕ್ಕೆ ಬಂದಿಲ್ಲ.  ನಾವು ನಾಶಗೊಳಿಸಬೇಕಿರುವುದು ಬಲವಂತ ಮತ್ತು ಹಿಂಸೆಯಿಂದ ಲೈಂಗಿಕ ಪ್ರಚೋದನೆಯ ಸ್ವರೂಪಗಳನ್ನೇ ಹೊರತು ಪೋರ್ನೋಗ್ರಫಿಯನ್ನೇ ಅಲ್ಲ. 

ಇನ್ನೂ ಕೆಲವರು ಬೈಕ್ ಸವಾರಿಯಲ್ಲಿ ಮೊಬೈಲ್ ಅನ್ನು, ರಸ್ತೆಬದಿಗಳಲ್ಲಿ ಸಿಗರೇಟು, ಮಧ್ಯ ಪಾನಗಳನ್ನು ನಿಷೇಧಿಸಿದ ಹಾಗೆ ಇದುವೇ ಎನ್ನುತ್ತಾರೆ. ಹೌದು ಅವು ಒಳ್ಳೆಯ ನಿಯಂತ್ರಣಗಳು ಅಷ್ಟೇ. ಮನೆಯಲ್ಲಿ ಮೊಬೈಲ್ ಬಳಸಲು, ಧೂಮಪಾನ - ಮಧ್ಯಪಾನ ಮಾಡಲು ನಿಷೇಧವಿಲ್ಲ. ಸಾರ್ವಜನಿಕ ಬದುಕಿಗೂ ವೈಯುಕ್ತಿಕ ಬದುಕಿಗೂ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕು.  ಮತ್ತು ಪ್ರಾಣಿಸಂಭೋಗ, ಸಲಿಂಗ ಕಾಮ, ಹಲವು ಭಾವ ಭಂಗಿಗಳಲ್ಲಿರುವ ದೇವಳಗಳ ಮಿಥುನ ಶಿಲ್ಪಗಳನ್ನು ನೋಡಿಯೂ ಅದು ಶೃಂಗಾರವೆಂದೂ ಪೋರ್ನೋಗ್ರಫಿ ಅಲ್ಲವೆಂದು ಹೇಳುವವರಿಗೆ ಉತ್ತರಿಸದೇ ಇರುವುದೇ ಒಳ್ಳೆಯದು.    

ಜನರ ಆಹಾರವನ್ನು, ತೊಡುವ ಬಟ್ಟೆಯನ್ನು, ಆಡುವ ಭಾಷೆಯನ್ನು, ಓದುವ ಪುಸ್ತಕಗಳನ್ನು,  ಕಡೆಗೆ ಮನೆಯ ಕೋಣೆಯ ವೈಯುಕ್ತಿಕ ವ್ಯವಹಾರಗಳ ಮೇಲೆ ಹೇರುವ ಈ ’ನಿಷೇಧ ಸಂಸ್ಕೃತಿ’ ಭಾರತದಂತಾ ಉಪಖಂಡಕ್ಕೆ ಒಗ್ಗಿಕೊಳ್ಳುವುದಿಲ್ಲ. ಬದಲಿಗೆ ಜನರಲ್ಲಿ ಕೆಟ್ಟ ಕುತೂಹಲಕ್ಕೋ , ಸರ್ಕಾರ ವಿರೋಧಿ ಧೋರಣೆಗೊ ಕಾರಣವಾಗಿ ಬಿಡುತ್ತವೆ. ಕಾಮಸೂತ್ರವನ್ನು ಓದುವವರು ಓದಿಕೊಳ್ಳಲಿ,  ಪೋರ್ನ್ ನೋಡುವವರು ನೋಡಲಿ ಬಿಡಲಿ.. ಇದೆಲ್ಲವೂ ವ್ಯಕ್ತಿಗತ.

ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದಲೂ ಕಾರ್ಪೊರೇಟ್ ಸಂಸ್ಕೃತಿಗೆ ಗಾಳಿ ಬೀಸುತ್ತಾ ಅದರೊಂದಿಗೆ ಅಧಾರ್ ವಾಪಸಾತಿ, ವ್ಯಾಪಮ್ ಹಗರಣ, ಲಲಿತ್ ಮೋದಿ ವಿವಾದ, ಗಲ್ಲು ಶಿಕ್ಷೆ ರದ್ದತಿ, ರೈತರ ಸರಣಿ ಆತ್ಮಹತ್ಯೆ, ಭೂ ಕಾಯ್ದೆ ವಿವಾದ, ಹಣದುಬ್ಬರ, ಸಂಸತ್ತಿನ ಅಧಿವೇಶನಗಳಲ್ಲಿ ವಿರೋಧ ಪಕ್ಷಗಳ ನಿರಂತರ ಧರಣಿಗಳಿಗೆ ಸಿಕ್ಕಿ ಬೇಸತ್ತಿರುವ ಸರ್ಕಾರ, ಈ ಸುದ್ದಿಗಳನ್ನು ಹತ್ತಿಕ್ಕಿ ದಾರಿ ತಪ್ಪಿಸಲು ಬಳಸಿದ ಹೊಸಬಾಣ ಪ್ರಯೋಗದಂತಿದೆ ಈ ಹೊಸ ನಿಷೇಧ.


ಏನೇ ಆದರೂ ಜನತಂತ್ರ ಸರಕಾರಗಳು ನಿಷೇಧ ಸಂಸ್ಕೃತಿಗಳಿಗೆ ಹೊರತಾಗಿರುವುದು ಒಳ್ಳೆಯದು.


 - ಕನ್ನಡ ಪ್ರಭ - 8 ನೇ ಆಗಸ್ಟ್ 2015  (http://epaper.kannadaprabha.in/PUBLICATIONS/KANNADAPRABHABANGALORE/KAN/2015/08/05/ArticleHtmls/05082015007005.shtml?Mode=1)

Monday, June 8, 2015

ಪುಸ್ತಕ ಪ್ರಕಟಣೆ : ಒಂದು ಸಲಹೆ

ನೀವು ಬರಹಗಾರರಾಗಿದ್ದು  ಹೊಸ ಪುಸ್ತಕವನ್ನು ನೀವೇ  ಪ್ರಕಟಿಸಬೇಕೇ ? ಇಲ್ಲಿ ಗಮನಿಸಿ :

* ಒಳ್ಳೆಯ ಬರಹಗಳನ್ನು ಆಯ್ದು ಗೆಳೆಯರಿಂದ- ಹಿರಿಯರಿಂದ ಓದಿಸಿ ಅಥವಾ ನೀವೇ ಒಂದು ಬಿಡುವಾದ ಸಮಯದಲ್ಲಿ ಓದಿ. ನಂತರ  ಮತ್ತೆ ಅವುಗಳಲ್ಲಿ ಸೂಕ್ತವೆನಿಸಿದ ಒಂದಷ್ಟು ಬರಹಗಳನ್ನು ಆಯ್ದು ವರ್ಗೀಕರಣ ಮಾಡಿಕೊಳ್ಳಿ.

ಉದಾ : ಕವಿತೆ/ಕಥೆಗಳು ಆದರೆ ಒಂದಾದಮೇಲೆ ಮತ್ತೊಂದು ಯಾವ ಕವಿತೆ /ಕಥೆ ಬರಬೇಕೆಂದು ಅನಿಸಿದೆಯೋ ಹಾಗೆ. 
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ. 

* ಡಿಜಿಟಲ್ ಪ್ರಿಂಟಿಂಗ್ ಇರುವ ಕಾರಣ ಎಲ್ಲವೂ ಈಗ ಕಂಪ್ಯೂಟರ್ ಮಯ. ಹಾಗಾಗಿ
ನಿಮ್ಮ ಬರಹಗಳನ್ನು  ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ  ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು. 

* ನಿಮಗೆ Page Layout ಮಾಡಲು ಬಂದ್ರೆ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ Pagemaker, Indesign ಸಾಫ್ಟ್ವೇರ್ ಗಳಲ್ಲಿ  ಪುಟವಿನ್ಯಾಸ ಮಾಡಿ.  ಮಧ್ಯೆ ಮಧ್ಯೆ ನಿಮಗೆ ಬೇಕಾದ ರೇಖಾಚಿತ್ರಗಳನ್ನು ಕಲಾವಿದರಿಂದ ಬರೆಸಿಕೊಂಡು ಬಳಸಿಕೊಳ್ಳಿ. ಇಂಟರ್ನೆಟ್ ಚಿತ್ರಗಳನ್ನು ಬಳಸಿಕೊಳ್ಳುವಾಗ ಕಾಪಿ ರೈಟ್ ಇದೆಯೇ ಗಮನಿಸಿ. ಇದ್ದಲ್ಲಿ ಅಂತಹ ಚಿತ್ರವನ್ನೂ ಬಳಸಬೇಡಿರಿ. ಇಲ್ಲವಾದಲ್ಲಿ ಆರಾಮಾಗಿ ಬಳಸಿ ಮತ್ತು ಚಿತ್ರದ ಮೂಲವನ್ನು  ಪುಟದ ಕಡೆಯಲ್ಲೊ, ಪುಸ್ತಕದ ಕಡೆಯಲ್ಲೊ  ಹೆಸರಿಸಿ.   ನಿಮಗೆ ಸಾಧ್ಯವಿಲ್ಲ ಎಂದಾದರೆ DTP, ಗ್ರಾಫಿಕ್ಸ್ ಗಳು ಬೇಕಾದಷ್ಟಿವೆ. ಕನಿಷ್ಠ ಒಂದು ಪುಟಕ್ಕೆ 10 ರೂಪಾಯಿಯಂತೆ ನಿಮಗೆ ಪುಟವಿನ್ಯಾಸ ಮಾಡಿಕೊಡುತ್ತಾರೆ. ವಿನ್ಯಾಸ ಮುಗಿದ ನಂತರ Printout  ತೆಗೆಸಿಕೊಂಡು ಒಮ್ಮೆ Proof ನೋಡಿಕೊಂಡು ಬಿಡಿ. ಅಕ್ಷರ, ವ್ಯಾಕರಣ ದೋಷಗಳು ಇದ್ದಲ್ಲಿ ತಿದ್ದಿಸಿ.   

* ಮುನ್ನುಡಿ ಬೆನ್ನುಡಿಗಳನ್ನು ಬರೆಸುವುದಿದ್ದರೆ  1-2 ತಿಂಗಳು ಮುಂಚಿತವಾಗಿಯೇ ಬರೆಯುವವರಲ್ಲಿ ನಿಮ್ಮ ಬರಹದ ಪ್ರತಿಗಳನ್ನು ನೀಡಿರಿ.

* 1/8 ಕ್ರೌನ್ , 1/8 ಡೆಮಿ , 1/9 ಡೆಮಿ , 1/6 ಡೆಮಿ ಮುಂತಾದ ಪುಸ್ತಕದ ಗಾತ್ರಗಳಿವೆ. ನಿಮಗೆ ಬೇಕಾದ ಗಾತ್ರವನ್ನು ನಿರ್ಧರಿಸಿ ಮತ್ತು  ಕೆಲವು ವಿಶೇಷ ಗಾತ್ರಗಳಿಗೆ ಕಾಗದ ಸುಮ್ಮನೆ ಕತ್ತರಿಸಿ ಹಾಳಾಗುತ್ತದೆ. ಅದನ್ನು ಅದಷ್ಟೂ ತಡೆಗಟ್ಟಿ.

* ನಿಮ್ಮ ಬರಹಗಳಿಗೆ ತಕ್ಕ ಮುಖಪುಟ ವಿನ್ಯಾಸವನ್ನು ಮಾಡಿಸಿಕೊಳ್ಳಿ. ತುಂಬಾ ಚೆನ್ನ್ಗಿ ವಿನ್ಯಾಸ ಮಾಡುವ ಕಲಾವಿದರು ನಮ್ಮಲಿ ಸಿಗುತ್ತಾರೆ. ಕನಿಷ್ಠ ರೂ.2000ಕ್ಕೆಲ್ಲಾ ಒಳ್ಳೆಯ ವಿನ್ಯಾಸ ನಿಮಗೆ ಸಿಗುತ್ತದೆ. ಅಥವಾ ನೀವೇ ಬಣ್ಣ ಕಾಗದ ಇತ್ಯಾದಿಗಳ ಕೋಲಾಜ್ ಮಾಡಿ ಸಿದ್ದಪಡಿಸಿ ಅದನ್ನು ಗ್ರಾಫಿಕ್ಸ್ ನವರಲ್ಲಿ ಕೊಟ್ಟು ನಿಮ್ಮ ಪುಸ್ತಕದ ಅಳತೆಗಿಂತ ಅರ್ಧ ಸೆಮಿ ಹೆಚ್ಚಾಗಿಯೇ PSD ಫೋಟೋಶಾಪ್ ಫೈಲ್ ಮಾಡಿಸಿಕೊಳ್ಳಿ

* ಮುಖಪುಟ-ಒಳಪುಟ ವಿನ್ಯಾಸ ಮತ್ತು ಬರಹಗಳು ಒಂದಕ್ಕೊಂದು ಪೂರಕವಾಗಿಯೇ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲವೂ ಏನೇನೋ ಹೇಳುತ್ತಾ ಆಭಾಸವಾಗಿಬಿಡುವ ಸಾಧ್ಯತೆಗಳಿವೆ.

*  ಸಿದ್ದವಾದ ಮುಖಪುಟದ PSD ಫೈಲ್ ಮತ್ತು ಬರಹಗಳ ಒಳಪುಟವಿನ್ಯಾಸವನ್ನು PDF ಫೈಲ್ ಮಾಡಿಕೊಂಡು ಬದ್ದತೆಯುಳ್ಳ ಒಳ್ಳೆ ಮುದ್ರಕರನ್ನು ಭೇಟಿಯಾಗಿ ದರವನ್ನು ಕುರಿತು ಚರ್ಚಿಸಿ.

* ಪುಸ್ತಕ ಮುದ್ರಣಕ್ಕೆ ಒಳ್ಳೆಯ ಗುಣಮಟ್ಟವನ್ನೇ ಆರಿಸಿ.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor  ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.

ಕೆಳಗಿನದರದಲ್ಲಿ ಚೂರು ಹೆಚ್ಚು ಕಡಿಮೆಯಾಗಬಹುದು

70 GSM Maplitho - 4 color - 98/108 page - 1/8 ಕ್ರೌನ್ = ಕನಿಷ್ಠ ದರ ರೂ.18000
70 GSM Maplitho - 4 color - 98/108 page - 1/8 ಡೆಮಿ  = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ  = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ  = ಕನಿಷ್ಠ ದರ ರೂ.30000

* ಮುದ್ರಣಕ್ಕೆ ಕೊಟ್ಟ ಮೇಲೆ ಪೂರ್ಣಹಣವನ್ನು ಮುದ್ರಕರಿಗೆ ಪಾವತಿಸಿ. ಅದು ಒಳ್ಳೆಯ ಸಂಬಂಧವನ್ನು ಉಂಟು ಮಾಡುತ್ತದೆ. ಭಾಳಷ್ಟು ಪ್ರಕಾಶಕರು ಸರಿಯಾಗಿ ಹಣ ಪಾವತಿ ಮಾಡದೇ ಹೆಸರು ಕೆಡಿಸಿಕೊಂಡಿರುವುದೇ ಹೆಚ್ಚು :(  ಮಧ್ಯವರ್ತಿಗಳನ್ನು  ದೂರವಿಡಿ. ನೀವೇ ನೇರವಾಗಿ ಮುದ್ರಕರೊಂದಿಗೆ ಮಾತನಾಡಿ. ನಗದು ಹಣ ಪಾವತಿ ಮಾಡುವ ಬದಲು ಬ್ಯಾಂಕ್ , ಚೆಕ್ -ಡಿ‌ಡಿ ಮುಖಾಂತರ ಪಾವತಿ ಮಾಡಿ ಮತ್ತು ನಿಮ್ಮ ಮುದ್ರಣದ ಅವಶ್ಯಕತೆಗಳ ನಮೂದಾಗಿರುವ ( ಅಂದರೆ ಕಾಗದ - ಮುಖಪುಟ - ಸೈಜ್ ಗಳ ಕುರಿತ ಸ್ಪಷ್ಟ ಉಲ್ಲೇಖವಿರುವ) sale order ಅನ್ನು ಕೇಳಿ ಪಡೆದುಕೊಳ್ಳಿ. ಮುಂದೆ ಮೋಸ ಮಾಡಿದರೆ ಕಾನೂನು ಕ್ರಮ ಜರುಗಿಸಲು ಸಹಾಯವಾಗುತ್ತದೆ. ಮತ್ತು ಒಂದು ಬದ್ದತೆಯನ್ನು ಇಬ್ಬರಲ್ಲೂ ಉಂಟು ಮಾಡುತ್ತದೆ.

* ಪುಸ್ತಕವನ್ನು ISBN ನಲ್ಲಿ ರಿಜಿಸ್ಟರ್ ಮಾಡಬೇಕಿದ್ದರೆ 1-2 ತಿಂಗಳು ಮುಂಚಿತವಾಗಿಯೇ ನಿಮ್ಮ ಪುಸ್ತಕದ ಮುಖಪುಟದ ಪ್ರತಿಯೊಂದಿಗೆ ಕಲ್ಕತ್ತಾ ದಲ್ಲಿರುವ ಅದರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿ ( ಈ ಅರ್ಜಿಯೂ ಇಂಟರ್ನೆಟ್ ನಲ್ಲಿ ಲಭ್ಯ. ಅದನ್ನು ಪ್ರಿಂಟ್ ತೆಗೆದು ವಿವರ ತುಂಬಿಸಿ ಮುಖಪುಟದ ಪ್ರತಿಯ ಜೊತೆ ಅವರ ವಿಳಾಸಕ್ಕೆ ಕಳುಹಿಸಿದರೆ ಸಾಕು. ಇದಕ್ಕೆ ಯಾವ ಶುಲ್ಕವೂ ಇಲ್ಲ.
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.

* ISBN ಕಷ್ಟವೆನಿಸಿದರೆ ಮುದ್ರಣವಾದ ನಂತರದಲೇ ಬೆಂಗಳೂರಿನಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಹೋಗಿ ಪುಸ್ತಕದ 3 ಪ್ರತಿಗಳನ್ನು ಕೊಟ್ಟು ನಿಮ್ಮ ಪುಸ್ತಕದ ಕಾಪಿ ರೈಟ್ ಅನ್ನು ಕಾಯ್ದಿಸಿರಿಕೊಳ್ಳಿ.  ಇದಕ್ಕೆ ಯಾವ ಶುಲ್ಕವೂ ಇಲ್ಲ. ಉಚಿತ.

* ಗ್ರಂಥಾಲಯ ಇಲಾಖೆ ವರ್ಷಕ್ಕೆ ಎರಡು ಬಾರಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಕರೆಯುತ್ತದೆ. ಬಹುಶಃ ಜೂನ್ ಮತ್ತು ಜನವರಿಯಲ್ಲಿ. ಆವಾಗ ಅರ್ಜಿಯ ಜೊತೆಯಲ್ಲಿ ನಿಮ್ಮ ಪುಸ್ತಕದ ಮೂರು ಪ್ರತಿ ಹಾಗೂ ಕಾಪಿ ರೈಟ್ ಮಾಡಿಸಿದ ಸರ್ಟಿಫಿಕೇಟ್ ನ ನೆರಳಚ್ಚು ಪ್ರತಿ ( ಜೇರಾಕ್ಸ್ ) ಜೊತೆಗೆ ಸರಿಯಾದ ಸಮಯಕ್ಕೆ ಸಲ್ಲಿಸಿ. ಆಯ್ಕೆ ಗೊಂಡಲ್ಲಿ 300 ಪ್ರತಿಗಳನ್ನು ಪರಿಣಿತರು ನಿರ್ಧರಿಸಿದ ಬೆಲೆಯಲ್ಲಿ ಕೊಂಡುಕೊಳ್ಳುತ್ತಾರೆ.

ಉದಾ : ಈ ಬೆಲೆಯು ಕಾಗದ, ಮುದ್ರಣ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಮತ್ತು ಒಂದು ಪುಟ ಇಂತಿಷ್ಟೂ ಎಂದು ನಿಗದಿ ಮಾಡಲಾಗುತ್ತದೆ. ಒಂದು ಅಂದಾಜು ಮಾಡುವುದಾದರೆ          
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ  ರೂ. 64.80 ಯಂತೆ  

* ನಿಮಗೆ ಬೇಕಾದ ಪುಸ್ತಕದಂಗಡಿಗಳಿಗೆ ಕೊಡಬಹುದು. ಈಗೆಲ್ಲಾ ಶೇ. 40-50 ರಷ್ಟು ರಿಯಾಯಿತಿ ಕೇಳುವುದು ಸಾಮಾನ್ಯವಾಗಿದೆ. ಉಳಿದ ಹಣವು ಪುಸ್ತಕ ಮಾರಾಟವಾದ ನಂತರವೇ ನಿಮ್ಮನು ತಲುಪುವುದು.

* ಪುಸ್ತಕಗಳನ್ನು ಕಡಿಮೆ ಬೆಲೆಯಿಟ್ಟು ನೇರ ಮಾರಾಟ ಮಾಡಿ. ( ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕುವುದು, ಆನ್ಲೈನ್ ಮೂಲಕ ಮಾರುವುದು (pay u money ಮುಂತಾದ ವೆಬ್ಸೈಟ್ ಗಳು ಮತ್ತು flipkart , amazon, snapdeal ಮಳಿಗೆಗಳು)  ಓದುಗರಿಗೂ ಒಳ್ಳೆಯ ಪುಸ್ತಕ ಒಳ್ಳೆಯ ದರಕ್ಕೆ ಸಿಗುವಂತಾಗಲಿ.

ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ಸುಕರಾಗಿರುವ ಜನರಿಗೆ ನನ್ನ ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ. ವಿಚಾರಿಸಿ ಮುನ್ನಡೆಯಿರಿ.

- ಆರ್.ಪಿ.

Thursday, April 16, 2015

ದೇಶಭಕ್ತ ಸೂಳೆಮಗನ ಗದ್ಯಗೀತೆ ~ ಪಿ. ಲಂಕೇಶ್




ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ
ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ
ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ
ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ
ಯಾರು ಕಾಣದ ನಿಮ್ಮ ಕೊಲೆಮನೆಯಲ್ಲಿ 
ಕಂಡುಬಿಟ್ಟಾರೆಂಬ ಭಯದಲ್ಲಿ
ಕಂಡಿದ್ದಾರೆ ಬಿಡು ಎಂಬ ನಿರಾಳದಲ್ಲಿ
ಲಂಗೋಟಿ ಬಿಚ್ಚಿಕೊಂಡು ಹೊಲಿಸುತ್ತಾ ಹೋಗುವುದ,

ಥೂ,  ಸೂಳೆಮಕ್ಕಳೆ! ಮುಖ ಮುಚ್ಚಿ ಓಡಾಡುವ ಸುಖದ
ಅಮ್ಮ ಕೂತಲ್ಲಿ ಉದುರಿಸಿದ ನಿಮ್ಮ ಕೋಟಿಗಳ ಲೆಕ್ಕ ಹಾಕಿ
ಮಕ್ಕಳಿವರೇನಮ್ಮ? ಎಂಥ ಒದರಿ ಕಬ್ಬಿಗರ ಕುರುವಾಗಿ
ಆಹಾ! ಆರ್ಯಪುತ್ರ! ಎಂಥ ಸಂಸ್ಕೃತಿ, ಎಂಥ ಸ್ಥಿತಿ, ಅಂತ ಅಡಿಗ-
ಡಿಗೆ ಸ್ಟಂಟ್ ಹಾಕಿ ನಿಲ್ಲಬೇಕಿನ್ನಿಸುತ್ತೆ – ಆದರೆ,

ನಿಮ್ಮ ಅಮ್ಮನ್ನ ಹೊಗಳಿ ಪದ್ಮಭೂಷಣನಾಗಿ
ನರಸತ್ತು, ಪುಷ್ಪಾಲಂಕೃತನಾಗಿ, ಪೂರ್ಣದೃಷ್ಟಿ ಬೊಚ್ಚುಬಾಯಿ ಶುಂಠ
ಕೃತಾರ್ಥ ನರೆತ ಖಾಲಿತಲೆ ಆಗಬೇಕೆನ್ನಿಸುತ್ತೆ – ಆದರೆ,
ಕೆಚ್ಚಲು ತುಂಬಿ, ಚೌಕಾಶಿಯಲ್ಲಿ ಕೈ ಹಿಡಿದು ಸೀರೆ ಬಿಚ್ಚದೆ ಸತ್ತು
ಸತ್ತಿಲ್ಲವೆಂದು ಜೋಗ್, ಜೋಕ್, ಪಿಕ್ ನಿಕ್ , ಮಕ್ಕಳು, ಮರಿ ;
ಇವಳ ಮತ್ತು ತೊಡೆಗಳ ಮತ್ತು ಕನಸುಗಳ ಮತ್ತು ಸ್ತನಗಳ ಮತ್ತು
ದಕ್ಷಿಣೆಯ ಮತ್ತು ವರನ ಮತ್ತು ಮದುವೆಯ ಮತ್ತು
ಮತ್ತು ಮತ್ತು ಮತ್ತು

ಸೂಳೆಮಕ್ಕಳೆ ಸಾಂಪ್ರದಾಯಿಕ ಲಗ್ನ ಬಲ್ಲೆಯಾ ?
ಹೆದರಿಕೆಯ ಜೊತೆಗೆ ಉಕ್ಕುವ ಉತ್ಸಾಹ ಬಲ್ಲೆಯಾ ?
ಗೆದ್ದೆವು ಎನ್ನುವಷ್ಟರಲ್ಲಿ ತೊಡೆಯಲ್ಲಿ ಕುಣಿವ ಗುಟ್ಟ ಬಲ್ಲೆಯಾ ?
ಗುಟ್ಟನ್ನು ಉಳ್ಳವರ ಸೊಕ್ಕ ಬಲ್ಲೆಯಾ ? ಆದರೂ,

ಆಹಾ! ದೇಶ ಬಾಂಧವ, ನಿನ್ನ ಅಪ್ಪಿ ಕೊಂಡಾಡಲೆ!
ನಿನ್ನ ಕೂದಲು ಬಾಚಿ ಹೂಮಾಲೆ ಹಾಕಲೆ!
ವೀರಮಾತೆಯ ಆರ್ಯಸಂಸ್ಕೃತಿಯ ಕುಸುಮ! ಅನ್ನಲೆ!
ತಿಲಕವಿಟ್ಟು ಸಂತೋಷಪಡಲೇ!

ಸೂಳೆಮಗನೆ, ನಿನ್ನ ಕರೆದಾಗ ನನ್ನನ್ನೇ ಕರೆದಂತಾಗುತ್ತೆ.
ನೀನೆಂದೊಡೆ ನಿನ್ನ ಅಮ್ಮನ ನೆನಪಾಗುತ್ತೆ .
ನನ್ನ ಅಮ್ಮನ ನೆನಪಾಗುತ್ತೆ
ಸುಳ್ಳು ಶುರುವಾದದೊಡನೆ  ಯಾರೋ ಗೊಳ್ಳನೆ ನಕ್ಕು ಬೆವೆಯುತ್ತೆ.

ಈ ಗಂಟಿಗೇನನ್ನುವುದು?

ಕೈಯಲ್ಲಿ ಕೈಯಿಟ್ಟು ನಡೆಯೋಣವೆ?
ಸಂದೇಹದಿಂದ ಕಂಡವರ ಜಾತಕ ಓದೋಣವೆ?
ಜೇಬಲ್ಲಿ ಕೈಯಿಟ್ಟು ಸುಮ್ಮನೆ ಕೂಡೋಣವೆ?
ಮೀಸೆ ಕತ್ತರಿಸುತ್ತ ಅಥವಾ ಪದ್ಮಶ್ರೀ ಆಗುತ್ತ
ಅಥವಾ ಗೀತೆ ಓದುತ್ತ ಅಥವ ರಸ್ತೆಗಳ ಗುಡಿಸುತ್ತ
ಅಥವಾ

ಅನ್ನುತ್ತಿದ್ದಂತೆಯೇ ನಾಲಗೆ ನರೆಯುತ್ತೆ.
ಗಲ್ಲದ ಹಿಂದೆ ಕೂದಲು ನರೆಯುತ್ತೆ.
ಪದ್ಮಭೂಷಣನ, ವೀರಯೋಧನ, ಪ್ರಧಾನಿಯ, ಹಜಾಮನ
ಅವಳು, ತೊಡೆ, ಕೂದಲು ಎಲ್ಲ ನರೆಯುತ್ತೆ ;
ಚೆಡ್ಡಿಯ ಕೂದಲು ನರೆಯುತ್ತೆ.
ಎಲಿಸಬೆತ್ ಮತ್ತು ಟೇಲರ್ ಮತ್ತು ಮಾಲೀಕ, ಮಾಣಿ
ದೇವರು, ದೆವ್ವ, ಕೋಟು, ಲಂಗ, ಸಮವಸ್ತ್ರದ ಕೂದಲು ನರೆಯುತ್ತೆ.
ಸತ್ಯ, ಸುಳ್ಳು, ಅಕ್ಕರೆ, ಸಂಭ್ರಮ, ಗುಟ್ಟು
ಎಲ್ಲ ನರೆಯುತ್ತೆ.

ಅದಕ್ಕೆ ಹೇಳುತ್ತೇನೆ , ಅನುಜ : ನೀನಿನ್ನು ನಿನ್ನ ಬ್ಯಾಗ್ ಹಿಡಿದು ನಗುತ್ತ
ಕುಶಲ ವಿಚಾರಿಸುತ್ತ ಸಭ್ಯತೆ ಸೂಸುತ್ತ

ಇತ್ತ ಬಂದರೆ ನಿನ್ನ ಹಿಡಿದು ತೋರುತ್ತೇನೆ ;
ಪಾಪಚಿತ್ತದ ನರೆಯ, ನರೆತ ಗೀತೆ, ಗಟಾರವ,
ವರ್ಗವಿಲ್ಲದೆ, ಮತ್ತೆ ಪ್ರಾಕ್ಸಿಯಿಲ್ಲದೆ, ಮತ್ತೆ ಕರ್ಮದ ಗಾಲಿಯಿಲ್ಲದೆ

ಎಲ್ಲ ಬೆಳ್ಳಗಾದ, ಬಿರುಕಾಗಿ ಬೂದಿಯಾದ,  ಗತಿಯ.

ಅಥವಾ ಬೆಳಗಾಗುವ, ಗಿಡಗಂಟೆಗಳ ಕೊರಳಾಗುವ,
ಮತ್ತೆ ಕತ್ತಲಾಗುವ, ಹಾಗೇ ಮುಗಿದು ಮೊಗ್ಗೆಯಾಗುವ
ಸ್ಥಿತಿಯ.   





 ~ ಪಿ. ಲಂಕೇಶ್