Saturday, January 21, 2017

ಅಡುಗೆಯೊಂಬುದೊಂದು ಆಧ್ಯಾತ್ಮ

ಈ ಅಡುಗೆ ಅನ್ನುವುದು ಯಾಕೆ ಯೋಗ ಅಥವಾ ಅಧ್ಯಾತ್ಮ ಅಂತ ಪರಿಗಣಿತವಾಗಬಾರದು?! ಇದು ಸುಮಾರು ಎರಡು ದಶಕಗಳ ಕಾಲದಿಂದ ನನ್ನ ತಲೆಯಲ್ಲಿ ಓಡಾಡುತ್ತಿರುವ ಎರೆಹುಳು  ಅಂದಹಾಗೆ ಅಧ್ಯಾತ್ಮ ಮತ್ತು ಯೋಗ ಅನ್ನುವುದು ನಿಮಗೆಲ್ಲಾ ಗೊತ್ತಿರಬೇಕಲ್ಲ. ಈಚೆಗೆ ಮಾರ್ಕೆಟ್ ನಲ್ಲಿ ಈರುಳ್ಳಿ - ಟೋಮೊಟೊ ಗಿಂತಲೂ ಹೆಚ್ಚು ಬಿಕರಿಯಾಗುವ ಮತ್ತು ವೆಚ್ಚದಾಯಕ ನಿತ್ಯೋಪಯೋಗಿ ಸಾಧನಗಳು. ಟಿವಿಗಳಲ್ಲಿ ಸಿಡಿಗಳಲ್ಲಿಯೋಗಅಧ್ಯಾತ್ಮದ ಸೆಂಟರ್ ಗಳಲ್ಲಿ ತೂಕಕ್ಕೆ ಹಾಕುವುದಿಲ್ಲ ಬಿಟ್ಟರೆ ಗ್ಯಾರಂಟಿ ದುಡ್ಡಿಗೆ ಮಾರುತ್ತಾರೆ. ನನಗೂ ಈ ಧಾವಂತದ ಬದುಕಿನಿಂದ ಸ್ವಲ್ಪ ಅಧ್ಯಾತ್ಮ - ಯೋಗದ ಕಡೆಗೆ ಹೊರಳಿಕೊಳ್ಳಬೇಕು ಎಂದೆನಿಸಿ ಸುಮ್ಮೆನೆ ಅತ್ತ ನೋಡಿದೆ.. ಹುಃ ಅದು ಸುತಾರಾಂ ನನಗೆ ಒಗ್ಗಿಕೊಳುವುದಿಲ್ಲವೆನಿಸಿ ಬಾಲ್ಯದಿಂದಲೂ ನಾನು ಬಹಳ ಆವಿಷ್ಕಾರಗಳಲ್ಲಿ ತೊಡಗಿರುವ ಅಡುಗೆಯನ್ನೇ ಆರಿಸಿಕೊಂಡೇ. ಅಡುಗೆ ನನ್ನ ಅಧ್ಯಾತ್ಮ ಮತ್ತು ಯೋಗದ ಮಾರ್ಗ. ಮೂಗು ಹಿಡಿದು ಕಾಲು ಮಡಚಿ ಗಂಟೆಗಟ್ಟಲೇ ಕೂರುವ ಬದಲು ಮಾಂಸ - ಕಾಯಿಪಲ್ಲೆಗಳನ್ನು  ತರಹೇವಾರಿ ಹಚ್ಚುತ್ತಾ ಉಪ್ಪು ಹುಳಿ ಖಾರಗಳನ್ನು ಬೆರೆಸಿ ಹೊಸ ಹೊಸ ರುಚಿ ರುಚಿಗಳನ್ನು ಮಾಡುತ್ತಾ ಅದನ್ನು ಧೇನಿಸುತ್ತಾ ಒಲೆಯ  ಮುಂದೆ ಕಾಲ ಕಳೆಯುವುದು ಯಾವ ಅಧ್ಯಾತ್ಮಕ್ಕೂ ಕಡಿಮೆ ಇಲ್ಲ ಎನಿಸಿಬಿಟ್ಟಿತು. ಅಲ್ಲದೇ ಈ ಆಧ್ಯಾತ್ಮ ನಂಬಿದವರ ಹೊಟ್ಟೆಯನ್ನಂತೂ ತುಂಬಿಸುತ್ತದೆ ಹೊರತು ಯಾರನ್ನೂ ಮೋಸ ಮಾಡುವುದಿಲ್ಲ ನೋಡಿ.  ಅಪ್ಪಿ ತಪ್ಪಿ ಅಜೀರ್ಣವಾಗಬಹುದು ಅಷ್ಟೇ! ಅದರಿಂದಲೂ ಹೊಟ್ಟೆ ಶುಚಿಯಾಗುವ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು. ಇದೆಲ್ಲಾ ತುಂಬಾ ಪಾಸಿಟಿವ್ ಯೋಚಕರಿಗೆ ಎಂದು ಕೈತೊಳೆದುಕೊಳ್ಳುವವರೂ ಇದ್ದಾರೆ.    




ಈ ಅಧ್ಯಾತ್ಮ ಗುಂಗು ಹತ್ತಿದ್ದು ಹಳ್ಳಿಯಿಂದ ಸಿಟಿಗೆ ಬಂದು ನಾನು  ಹೈಸ್ಕೂಲ್ ಸೇರಿದ ಸಮಯದಲ್ಲಿ.  ಅಮ್ಮ  ಊರಿಗೆ ಹೋಗುವುದನ್ನೇ ಕಾಯ್ದು  ಮನೆಯಲ್ಲಿ ಇರುವ ಏನೇನೋ ತರಕಾರಿಗಳನ್ನು ಸುಲಿದು ಕೊಚ್ಚಿ ಎಣ್ಣೆಯ ಬಾಣಲೆಗೆ ಸುರಿದು ಕುದಿಸಿ ಅದಕ್ಕೊಂದಷ್ಟೂ ಬೇಳೆ- ಅಕ್ಕಿ  ಹಾಕಿ ಚೆನ್ನಾಗಿ ಕುದಿಸುವುದು. ಆ ದಿನಗಳಲ್ಲಿ ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಮೋಗ್ಲಿ ಕಾರ್ಟೂನ್ (the jungle book) ಉದಯ ಟಿವಿಯಲ್ಲಿ ಬರ್ತಿತ್ತು ಅದೂ ಕನ್ನಡದಲ್ಲಿ. ಅದನ್ನು ನೋಡುತ್ತಾ ಕುಳಿತು ಬಿಟ್ಟರೆ ಈ ಒಲೆಯ ಅದರ ಮೇಲೆ ಬೇಯುತ್ತಿರುವ ನಳಪಾಕ ಎರಡೂ ಅಬ್ಬೇಪಾರಿಗಳೇ. ನಮ್ಮ ಏರಿಯಾದ ಮನೆಗಳು  .ಕುಂಬಾರ ಹೆಂಚಿನ ಒಟ್ಟೊಟ್ಟಿಗಿನ ಮನೆಗಳು. ನಮ್ಮ ಅಡುಗೆ ಮನೆಯಲ್ಲಿ ತಲಾ ಸೀಯಲು ಶುರುವಾದರೆ ಇಡೀ ಬೀದಿಗೆ ಕಂಟಿನ ವಾಸನೆ ಹಬ್ಬಿಕೊಂಡು 'ಪ್ರಸಾದೂ ss .... ' ರಾಗ ಎಳೆದುಕೊಂಡು ಯಾರಾದರೂ ಬಂದೆ ಬರ್ತಾ ಇದ್ರು. ಹಾಗೆ ರಾಗವನ್ನು ಕೇಳಿದಾಗಲೇ ನನಗೆ ಅಡುಗೆ ಮನೆಯ ಅಬ್ಬೇಪಾರಿಗಳು ನೆನೆಪಿಗೆ ಬರ್ತಾ ಇದ್ದುದು. ಅಮೇಲಿನದು ಯೋಗ ಕಾರ್ಯಕ್ರಮ. ಅಮ್ಮ ವಾಪಸು ಬರುವುದರೊಳಗೆ ,ಮನೆಯಲ್ಲಿ ವಾಸನೆ ಹೋಗಿಸಿ,ತಳ ಹಿಡಿದು ಕರಟಾಗಿರುವುದನ್ನು ತೆಗೆದು ಪಾತ್ರೆಯನ್ನು ಮೊದಲಿನಂತೆ ಮಾಡುವುದು. ಆದಂತೂ ಹರಸಾಹಸ. ಮೊದಲು ಚಾಕುವಿನಿಂದ ಕೆರೆದು ಬಂದಷ್ಟನ್ನೂ ತೆಗೆದು ಆಮೇಲೆ ಅದಕ್ಕೆ ಚೂರು ಸರ್ಫಿನ ಪುಡಿ ಹಾಕಿ ನೆನೆಸಿ ಮತ್ತೆ ತೆಂಗಿನ ಚಗರೆಬಚ್ಚಲು ಮನೆ ಒಲೆಯ ಬೂದಿಇಟ್ಟಿಗೆ ಪುಡಿ ಹಾಕಿ ಕಪ್ಪೆಲ್ಲಾ ಕರಗುವವರೆಗೂ ತಿಕ್ಕುತ್ತಾ ಕೂರುವುದು. ಕೆಲವು ಸಲ ಅನ್ನದ ಬದಲು ಹಾಲಿನ ಪಾತ್ರೆಯನ್ನು ಒಲೆಯ ಮೇಲೆ ಇತ್ತು ಮೂರು ಕಿಮಿ ದೂರದ ಶಾಲೆಗೆ ಹೋಗಿದ್ದ ಉದಾಹರಣೆಗಳು ಬೇಕಾದಷ್ಟಿವೆ. ಮಧ್ಯಾಹ್ನ ಉತ್ತಕ್ಕೆ ಬಿಟ್ಟಾಗ ನೆನೆಸಿಕೊಂಡು ಸೈಕ್ಲು ತುಳಿದುಕೊಂಡು ಬಂದು ಗ್ಯಾಸ್ ಆರಿಸಿ ಪಾತ್ರೆ ತಿಕ್ಕಿದ್ದನ್ನು ಮರೆಯಬಹುದೇ!

ನಾವು ಹುಟ್ಟಾ ಮಾಂಸಾಹಾರಿಗಳು ನಮ್ಮ ಮನೆದೇವರಂತೂ ನೈವೇದ್ಯಕ್ಕೆ ಬಾಡೂಟವೇ ಆಗಬೇಕು ಅನ್ನುವವನು. ಯುಗಾದಿ - ಶ್ರಾವಣ - ಮಹಾಲಯ ಅಮಾವಾಸ್ಯೆಗಳಲ್ಲಿ ದೊಡ್ಡ ಸಮಾರಾಧನೆಯೇ ನಮ್ಮ ಮನೆಗಳಲ್ಲಿ ಆಗುತ್ತದೆ. ಬಂಧುಗಳು - ಸ್ನೇಹಿತರು ಎಲ್ಲ ಕೂಡಿಕೊಳ್ಳುತ್ತಾರೆ. ಆದರೆ ಅವರಿಗೆಲ್ಲಾ ಅಡುಗೆ ಮಾಡುವವರು ಯಾರುಅದಕ್ಕಾಗಿ ಅಡುಗೆ ಭಟ್ಟರು ಅಂತೆಲ್ಲ ಇರಲಿಲ್ಲ ( ಈವಾಗ ಲಭ್ಯರಿದ್ದಾರೆ! ) ಮನೆಯ ಗಂಡಸರೇ ಸೇರಿಕೊಂಡು ಮಾಂಸ ಕತ್ತರಿಸಿ ಹಚ್ಚಿ ಸಾಂಬಾರಿಗೆಗೊಜ್ಜಿಗೆ ಅಂತೆಲ್ಲ ಭಾಗ ಮಾಡಿ ಚೆರ್ಬಿಯನ್ನು (ಕೊಬ್ಬು ) ವಿಶೇಷವಾಗಿ ಎತ್ತಿಟ್ಟುಕೊಂಡು ಮನೆಯ ಹೊರಗೆ ಅಥವಾ ಕೊಟ್ಟಿಗೆಯ ಜಾಗಗಳಲ್ಲಿ ಒಲೆಯನ್ನು ಹಾಕಿ ಮನೆಯಲ್ಲಿಯೇ ಇರುವ ದೊಡ್ಡ ದೊಡ್ಡ  ತಾಮ್ರದ ದಬರೆಗಳನ್ನುಹಿತ್ತಾಳೆ ಹಂಡೆಗಳನ್ನು ಹೊರಮೈಗೆ ಮಣ್ಣು ಮೆತ್ತಿ (ಉರಿಗೆ ಕಪ್ಪಿಡಿಯಬಾರದೆಂದು) ಒಲೆಯ ಮೇಲೆ ಇಟ್ಟು ಅರಿಶಿನ ಈರುಳ್ಳಿ ಒಗ್ಗರಣೆ ಹಾಕುವುದರ ಮೂಲಕ ಶುರು ಮಾಡುತ್ತಿದ್ದರು. ಹೆಣ್ಣು ಮಕ್ಕಳು ತರಕಾರಿ ಹಚ್ಚಿಕೊಡುವುದುಮಸಾಲೆ ರುಬ್ಬುವುದುಪೂಜೆಗೆ ಸಿದ್ದ ಮಾಡಿಕೊಳ್ಳುವುದುಮನೆಗೆ ಬಂದ ಅತಿಥಿಗಳ ಸತ್ಕಾರ ಹೀಗೆ ಬೇರೆಯ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಆಶ್ಚರ್ಯವೆಂದರೆ ವರ್ಷದ ಇತರ ದಿನಗಳಲ್ಲಿ ಒಂದು ಕಾಫಿ ಕೂಡ ಮಾಡಿಕೊಳ್ಳದ ಗಂಡಸರು ಈ ಹಬ್ಬಗಳಲ್ಲಿ ತುಂಬಾ ಅಚ್ಚುಕಟ್ಟಾಗಿ ಅಡುಗೆ ಮನೆಯನ್ನು ನಿಭಾಯಿಸುತ್ತಿದ್ದರು. ಅಕ್ಕಪಕ್ಕದ ಮನೆಯವರುಸೋದರ ಸಂಬಂಧಿಗಳು ಮೊದಲೇ ಇಂತ ವೇಳೆಗೆ ಬರಬೇಕೆಂದು ನಿಶ್ಚಯಿಸಿಕೊಂಡು ಬೆಳಗಾಗುವ ಹೊತ್ತಿಗೆ ಮೊದಲು ಮಾಂಸ ಸಿದ್ದವಾಗಬೇಕುಆಮೇಲೆ ಸಾಂಬಾರುಗೊಜ್ಜುಮುದ್ದೆಅನ್ನ ಉಳಿದ ಸಣ್ಣ ಪುಟ್ಟ ತಿಂಡಿಗಳು ಸೇರಿ   ಮಧ್ಯಾಹ್ನದ ಹೊತ್ತಿಗೆ ಎಲ್ಲ ಅಡುಗೆಗಳು ಸಿದ್ದವಾಗುತ್ತಿದ್ದವು.  ಹಿತ್ತಾಳೆ ಹಂಡೆಯ ಮಟನ್ ಸಾಂಬಾರಿಗೆ  ಇಷ್ಟು ಕೈ ಉಪ್ಪುಬೋಟಿ ಗೊಜ್ಜಿಗೆ ಇಷ್ಟು ಹಿಡಿ,ಕೋಳಿ ಮಾಂಸದ ಫ್ರೈಗೆ ಇಷ್ಟು ಆಮೇಲೆ ಇಷ್ಟು ಬಟ್ಟಲು ಮಸಾಲೆ ಇಷ್ಟು ಸೌಟು ಖಾರದ ಪುಡಿಇಷ್ಟು ಬೊಗಸೆ ಬೆಳ್ಳೆಲ್ಲಿ  ಎಂಬ ಅವರ ಲೆಕ್ಕಾಚಾರ ನನಗೆ ಎಂದೂ ಅರ್ಥವೇ ಆಗುತ್ತಿರಲಿಲ್ಲ. ಅವರು ಕನಿಷ್ಠ ರುಚಿಯನ್ನು ಕೂಡ ಅಡುಗೆ ಮಾಡುವಾಗ ನೋಡುತ್ತಿರಲಿಲ್ಲ. ಕಾರಣ ದೇವರಿಗೆ ಮೊದಲ ಎಲೆಯ ಪ್ರಸಾದವಾಗಬೇಕು. ನಂತರವೇ ನಮ್ಮೆಲ್ಲರ ಊಟ. ಮುದ್ದೆಯನ್ನು ಮಾಡುವುದನ್ನು ನೋಡುವುದು ಗರಡಿ ಮನೆಯ ಜಟ್ಟಿಗಳ ಕುಸ್ತಿ ಪಂದ್ಯವನ್ನು ನೋಡಿದಂತೆ ಇರುತ್ತಿತ್ತು. ಕುದಿಯುವ ನೀರಿಗೆ ರಾಗಿ ಹಿಟ್ಟನ್ನು ಹಾಕಿ ದೊಡ್ಡ ದೊಣ್ಣೆಗಳಲ್ಲಿ ಅದನ್ನು ತಿರುವುತ್ತಾ ಬೇಯಿಸುವುದು ಬೆಂದ ಮೇಲೆ ಬನಿಯಾಗಿ ಮತ್ತೆ ತಿರುವಿ ಉದ್ದಕ್ಕೆ ಬೊಂಬಿನಂತೆ ಮುದ್ದೆಯ ಹಿಟ್ಟನ್ನು ಮಾಡಿಕೊಂಡು ದೊಡ್ಡ ತಟ್ಟೆಯ ಮೇಲೊ ಕಲ್ಲು  ಹಾಸಿನ ಮೇಲೊ ತುಂಡಾಗಿ ಕತ್ತರಿಸಿಕೊಂಡು ಬಿಸಿಬಿಸಿ ಮುದ್ದೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ಇನ್ನೂ ಅನ್ನವನ್ನು ಬೇಯಿಸಿದ ಮೇಲೆ ಉದ್ದ ಏಣಿಯ ಮೇಲೆ ಬಿದಿರಿನ ಮಂಕರಿಗಳನ್ನು ಸಾಲಾಗಿ ಇಟ್ಟು ಅದಕ್ಕೆ  ಅನ್ನವನ್ನು ಸುರಿದು ಗಂಜಿ ಬಸಿದು ಹೋಗುವಂತೆ ಮಾಡಿಆಮೇಲೆ ಅದನ್ನು ಜಗುಲಿ ಮೇಲೆ ಹಾಸಿದ ಬಿಳಿ ಬಟ್ಟೆ ಅಥವಾ ಸೋಗೆ ಚಾಪೆಯ ಮೇಲೆ ಹರಡುವುದು.. ಹೀಗೆ ದೊಡ್ಡ ಪ್ರಕ್ರಿಯೆಯೇ ಅಲ್ಲಿ ಜರಗುತ್ತಿತ್ತು. ಇದೆಲ್ಲವನ್ನು ನೋಡುತ್ತಾ ಬೆಳೆದ ನನಗೆ ಇಂತಹ ಹಬ್ಬದ ಈ ಅಡುಗೆ ಮನೆಯೇ ನನ್ನ ಮೊದಲ ಕರ್ಮಭೂಮಿ. ಮಾಂಸ ಕತ್ತರಿಸಲು ಚೂರಿಕೈಕೊಡಲಿ ಅದಕ್ಕೆ ಮರದ ಕೊಂಟು ಒದಗಿಸುವುದುತೊಳೆಯಲು ಬಿಸಿನೀರುಒಳಕೆ ಸೌದೆ ತಂದು ಒಲೆಯ ಬಳಿ ಜೋಡಿಸುವುದು,
ಅಮ್ಮ -ಅಜ್ಜಿಯರು ರುಬ್ಬಿದ ಮಸಾಲೆ - ತರಕಾರಿಗಳನ್ನು ಅಡುಗೆ ಮನೆಯತ್ತ ವರ್ಗಾಯಿಸುವುದು. ಬಿಡುವಿಲ್ಲದ ಕೆಲಸ ಪುಟಾಣಿಗಳಿಗೆ. ಆದ್ರೆ ನಮ್ಮ ಮನೆಯಲ್ಲಿ ನನ್ನ ಬಾಲ್ಯದ ಕಾಲಕ್ಕೆ ನಾನು ಒಬ್ಬನೇ ಪುಟಾಣಿ. ಉಳಿದ ಮಕ್ಕಳೆಲ್ಲಾ ಇನ್ನೂ ತೊಟ್ಟಿಲಲ್ಲಿ ಇದ್ದುವು. ಹಬ್ಬದ ಸಂಭ್ರಮವೆಂದರೆ ಅದು ಊಟದಲ್ಲೇ. ದೇವರು ಕೂಡ ಇಲ್ಲಿ ನಿಮಿತ್ತ. ಅನ್ನ ದೇವರ ಮುಂದೆ ಇನ್ನೂ ದೇವರು ಉಂಟೆ ಅನ್ನುವ ಹಾಗೆ. 


ಆಮೇಲೆ ಅಮ್ಮನ ತವರು ಮನೆಯ ಕುಲದೇವತೆ ಒಲೆಯ ಮೇಲೆ ಹಸೆಮಣೆಯನ್ನು ಕುಳಿತು ಹಾಕಿ ಕುಳಿತುಕೊಂಡಿದ್ದಾಳಂತೆ. ಹಾಗಾಗಿ ನನ್ನ ಅಜ್ಜಿಯ ಮನೆಯಲ್ಲಿ ತೀರಾ ಮಡಿ-ಮೈಲಿಗೆ ಆಚಾರಗಳು. ಅವರಂತೂ ಅಡುಗೆ ಮನೆಯನ್ನು ತುಂಬಾ ಶುಚಿಯಾಗಿ ದೇವರ ಕೋಣೆಯಂತೆ ಇಟ್ಟುಕೊಳ್ತಾ ಇದ್ರು. ಕೆಮ್ಮಣ್ಣಿನಿಂದ ಅದಕ್ಕೆ ಬಣ್ಣ ಮಾಡ್ತಾ ಇದ್ರು. ನನ್ನ ಬಾಲ್ಯವನ್ನು ಹೆಚ್ಚಿಗೆ ತಾಯಿ ತವರಲ್ಲೇ ಕಳೆದಿದ್ದ ನನಗೆ ಅಪ್ಪ -ಅಮ್ಮನ ಕಡೆಯವರ ಇದೆಲ್ಲ ಆಚರಣೆಗಳ ವೈವಿದ್ಯತೆಗಳು ಗೊಂದಲವನ್ನು ಉಂಟು ಮಾಡುತ್ತಿದುದು ಸಹಜವಾಗೇ ಆಗಿದ್ದರೂ ಶೂದ್ರ ಪರಂಪರೆಗಳಲ್ಲಿ ಆಹಾರ ಅನ್ನುವುದು ನಾನಾ ವಿಧಗಳಲ್ಲಿ ದೇವರ ಆಚರಣೆಯ ಬಹುಮುಖ್ಯ ಭಾಗವಾಗಿ ಕೆಲವೆಡೆ ದೇವರಾಗೀಯೇ ಕಾಣಿಸಿಕೊಳ್ಳುವುದು ಈಗಲೂ ಸೋಜಿಗವೆನಿಸುತ್ತದೆ.        

ನಾನು ಬೆಳೆದಂತೆ ಅಡುಗೆ ಮಾಡುವ ಆಸಕ್ತಿಯೂ ಬೆಳೆಯಿತು. ಕೊರಿಯನ್ - ಇಟಾಲಿಯನ್ ಅಡುಗೆಗೆಗಳು ಅದ್ರಲ್ಲಿ ಮಾಂಸ ಮತ್ತು ತರಕಾರಿಗಳ  ಸಮಬಳಕೆಯಂತೂ ನನಗೆ ತೀರ ಆಸಕ್ತಿಯನ್ನುಂಟು ಮಾಡಿತು. ಬಹುತೇಕ ಭಾರತೀಯ ಅಡುಗೆಗಳಲ್ಲಿ ಮಾಂಸದ ಜೊತೆಗೆ ಹೆಚ್ಚು ತರಕಾರಿಗಳನ್ನು - ಸೊಪ್ಪನ್ನು ಬಳಸುವುದು ಆಘೋಷಿತವಾಗಿ ನಿಷಿದ್ದ . ಆದರೆ ನಾನು ಬಿಡಬೇಕಲ್ಲ  ಈಗಾಗಲೇ ನಾವು ಮಾಸದ ಅಡುಗೆಗೆ ಮೆಂತ್ಯೆ - ಪಾಲಕ್ ಬಳಸುವುದು ರೂಢಿ. ಇನ್ನೂ ಕೊತ್ತಂಬರಿ ಸೊಪ್ಪು ಇಲ್ಲದ ಆಡುಗೆಉಂಟೆಅದೊಂದು ತರಹದ ಅಡುಗೆಯ ಅವಿಭಾಜ್ಯದ ಅಂಗ. ಅದರಲ್ಲೂ ಮಸಾಲೆಯುಕ್ತ ಅಡುಗೆಗಳಲ್ಲಿ ಆದಿಲ್ಲದ ಅಡುಗೆಯಿಲ್ಲ. ಅಲಂಕಾರಕ್ಕು ಸೈ ಆಸ್ವಾದಕ್ಕೂ ಸೈ.    ಚಿಕನ್ ಜೊತೆಗೆ ಎಲೆಕೋಸು ಬಳಸಿ ಹುರಿಯುವುದು,  ಜೇನುತುಪ್ಪ ಮೆಣಸಿನ ಪಂದಿಕರಿ,  ಹೊಟ್ಟೆಯೊಳಗೆ ಸಬ್ಬಸಿಗೆ - ಮೆಂತ್ಯೆ ಹಾಕಿ ಇಡೀ ಮೀನನ್ನ ಫ್ರೈ ಮಾಡೋದು ಇದೆಲ್ಲಾ ಅಮ್ಮನಿಗೆ ಮೊದಮೊದಲು ಬಹಳ ಕಿರಿಕಿರಿ ಯಾಗಿತ್ತು. ಅಡುಗೆ ಮನೆಗೆ ಬರಲೇ ಬೇಡ ಅಂತ ನಿರ್ಬಂಧ ಕೂಡ ವಿಧಿಸಿದ್ದಳು ಅಲ್ಲದೇ ನಾನು ಆಚಾರಕ್ಕೆ ವಿರುದ್ದ ಅಡುಗೆಗಳನ್ನು ಮಾಡ್ತೀನಿ ಅನ್ನೋ ಆರೋಪ ಬೇರೆ ಇತ್ತು. ಆದ್ರೆ ಅಮ್ಮ ದಿನೇ ದಿನೇ ಅಡುಗೆಯ ಹೊಸ ವಿಧಕ್ಕೆ ಹೊಸರುಚಿಗೆ  ಹೊಂದಿಕೊಂಡಳು. ಆದರೆ ಇದಕ್ಕೆ ಅದು ಇಷ್ಟು ಹಾಕು. ಇದು ಹಾಕಬೇಡ ಅಂತೆಲ್ಲಾ ಒಂದಷ್ಟು ಉಪದೇಶ ಮಾಡಿ ಕಡೆಗೆ ನಾನು ಇನ್ನೇನೋ ಮಾಡಿಕೊಂಡು ತಂದಾಗ ತಿನ್ನದೇ ಮುನಿಸಿಕೊಳ್ಳುವುದು. ಆಮೇಲೆ ತಿಂದು ಓಕೆ ಪರ್ವಾಗಿಲ್ಲ ಅನ್ನೋದು ಈಗಲೂ ನಡೆಯುತ್ತಲೇ ಇದೆ. 



ಆರಂಭದಲ್ಲೇ ಹೇಳಿದಂತೆ ಈ ಅಡುಗೆ ಅನ್ನುವುದು ನಿಜಕ್ಕೂ ಗಂಡು ಮಕ್ಕಳಿಗೆ ಒಳ್ಳೆಯ ಅಧ್ಯಾತ್ಮ ಮತ್ತು ಯೋಗ. ಅದು ಹೆಣ್ಣು ಮಕ್ಕಳನ್ನು ಅರಿತುಕೊಳ್ಳುವ ಹಾಗೂ ಬದುಕಿನಲ್ಲಿ ಸ್ವಾವಲಂಬಿ ಆಗುವ ಮಾರ್ಗ ಕೂಡ. ಸಂಪಾದಿಸುವುದು ಮಾತ್ರ ಸಾಲದು ಅದು ಹೊಟ್ಟೆಯನ್ನು ತುಂಬಿಸಬೇಕಲ್ಲ. ಹಸಿದಾಗ ಹಣದಿಂದ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಸಾಧ್ಯವಿಲ್ಲ. ಹೊಟ್ಟೆಯನ್ನು ಅಡುಗೆ ಅಡುಗೆ ಮಾತ್ರ ತುಂಬಿಸಬಲ್ಲುದು. ಎಲ್ಲೆಡೆ ಎಲ್ಲಾ ಸಮಯದಲ್ಲೂ ನಮಗೆ ಹೊಟೇಲ್ ಗಳುಅಡುಗೆ ಕೆಲಸದವರು ಮತ್ಯಾರೋ ಮಡಿ ಬಡಿಸುವ ಜನ  ಸಿಗಲಾರರು. ನಿನಗೆ ನೀನೆ ಗುರುವಾಗುವ ಮೊದಲ ಹಂತವೇ ಅಡುಗೆ.   ದುಡ್ಡುಕೊಟ್ಟು ಅಧ್ಯಾತ್ಮವನ್ನು ಕೊಳ್ಳುವ ಬದಲು  ತಾಯಿತಂಗಿ ಅಥವಾ ಹೆಂಡತಿಯ ಜೊತೆಗೆ  ಒಂದಷ್ಟು ದಿನ  ಅಡುಗೆ ಮನೆಯ ಸ್ವಯಂ ಸೇವಕರಾಗಿ ಕೆಲ್ಸ ಮಾಡಿ.  ಆಮೇಲೆ ಯಾವ ಅಧ್ಯಾತ್ಮ ಮತ್ತು ಯೋಗ ನಿಮ್ಮನ್ನು ಮಾನಸಿಕ-ದೈಹಿಕವಾಗಿ  ಸರಿಪಡಿಸಬಹುದಿತ್ತೋ ಅದಕ್ಕಿಂತಲೂ ಉತ್ತಮ ಮನುಷ್ಯರಾಗುವಿರಿ.. ಖಂಡಿತ. 

'ಉಸ್ತಾದ್ ಹೊಟೇಲ್ಎಂಬ ಮಲೆಯಾಳಿ  ಚಿತ್ರವೊಂದರಲ್ಲಿ ಹೊಟೇಲ್ ಮಾಲೀಕನಾದ ಉಸ್ತಾದ್ ತಾತ  ತಮ್ಮ ಮೊಮ್ಮಗನಿಗೆ ಹೋಟೆಲು ನಡೆಸುವ/ಅಡುಗೆ ಮಾಡುವುದರ  ಕುರಿತು ಒಂದೊಳ್ಳೆಯ ಮಾತು ಹೇಳುತ್ತಾನೆ ಯಾರು ಬೇಕಾದರೂ ಹೊಟ್ಟೆಯನ್ನು  ತುಂಬಿಸುವ ಅಡುಗೆ ಮಾಡಬಹುದು. ಆದರೆ ಮನಸ್ಸನ್ನೂ ತುಂಬಿಸುವ ಅಡುಗೆ ಮಾತ್ರ ಒಳ್ಳೆಯ ಅಡುಗೆ ಅನಿಸಿಕೊಳ್ಳುತ್ತದೆ'  ..ಎಷ್ಟು ನಿಜ ಅಲ್ಲವೇ. 
ಹಾ! ಮರತೇ ಬಿಟ್ಟೆ ಅಡುಗೆ ಮನೆಯಲ್ಲಿ ಬಿರಿಯಾನಿ ತಳ ಹಿಡಿಯಿತು ಅನಿಸತ್ತೆ. ನಾನು  ಹೊರಟೆ. ನೀವು ತರಕಾರಿ ಹಚ್ಚಲು ಶುರುಮಾಡಿಕೊಳ್ಳಿ.. ಇಂಗು- ತೆಂಗು ಇದ್ರೆ ಮಂಗ ಕೂಡ ಅಡುಗೆ ಮಾಡಬಹುದಂತೆ! ಹ್ಹ ಹ್ಹ ಹ್ಹ   


- ವಾರ್ತಾಭಾರತಿ ವಿಶೇಷಾಂಕ - ೨೦೧೬ ರಲ್ಲಿ ಪ್ರಕಟಿತ 

Monday, January 16, 2017

ನೆತ್ತರಲಿ ನೆಂದ ಚಂದಿರನ ಜೊತೆಗೊಂದು ಸಂಜೆ

ನೆತ್ತರಲಿ ನೆಂದ ಚಂದ್ರ - ಕವಿತೆ ಮತ್ತು ಅನುವಾದಗಳ ಮೂಲಕ ನಮಗೆ ಚಿರಪರಿಚತರಾಗಿರುವ ಹಿರಿಯ ಕವಯತ್ರಿ ಎಂ.ಆರ್. ಕಮಲ ಅವರ ಹೊಸ ಪುಸ್ತಕ. ಈ ಹಿಂದೆ ಮಾಯಾ ಎಂಜಲೋ ಅವರ ಆತ್ಮ ಚರಿತ್ರೆ 'ಸೆರೆ ಹಕ್ಕಿ ಹಾಡುವುದು ಏಕೆಂದು ಬಲ್ಲೆ' ಹಾಗೂ ಕಪ್ಪು ಹಕ್ಕಿಯ ಬೆಳಕಿನ ಹಾಡು, ಉತ್ತರ ನಕ್ಷತ್ರ ಇತ್ಯಾದಿಗಳನ್ನೂ ಆಫ್ರಿಕನ್ - ಅಮೆರಿಕನ್, ಆಫ್ರಿಕನ್ ಕವಯತ್ರಿಯರ ಕಾವ್ಯವನ್ನು ಸರಣಿಯಲ್ಲಿ ಕನ್ನಡಕ್ಕೆ ತಂದಿದ್ದರು. ಅದೇ ಸರಣಿಯ ಅರಬ್ ಕಾವ್ಯದ ಪುಸ್ತಕ ಇದಾದರೂ ವರ್ತಮಾನದ ಮಹಿಳಾ ಲೋಕದ ತಲ್ಲಣಗಳ ನಡುವೆ ಈ ಕವನ ಸಂಗ್ರಹದ ಒಳದನಿ ಸ್ವಲ್ಪ ತೀವ್ರ ಸ್ವರೂಪದ್ದಾಗಿದೆ. ಮತ್ತು ಈ ಕಾಲಕ್ಕೆ ಕನ್ನಡ ಓದುಗರಿಗೆ ಇದು ಲಭ್ಯವಾಗಿದ್ದು ಒಳ್ಳೆಯದೇ ಆಗಿದೆ.



ಅರಬ್ ಕಾವ್ಯದ ಭೂತ ಮತ್ತು ವರ್ತಮಾನ
ಅರಬ್ ಕಾವ್ಯಕ್ಕೆ ಅರಬ್ ದೇಶದ ಇವತ್ತಿನ ರಾಜಕೀಯವಾದ ಭೌಗೋಲಿಕ ಪ್ರದೇಶದ ಸರಹದ್ದು ಅಲ್ಲವೇ ಅಲ್ಲ. ದುಬೈ , ಓಮನ್ , ಕುವೈತ್ , ಯುಎಇ ಕೊಲ್ಲಿ ರಾಷ್ಟ್ರಗಳಿಗೆ ಅರಬ್ ಸೀಮಿತವಾಗಿಲ್ಲ. ಈಜಿಪ್ಟ್ , ಲೆಬೆನಾನ್ , ಪ್ಯಾಲೆಸ್ಟೈನ್ , ಸಿರಿಯಾ, ಇರಾಕ್, ಉತ್ತರ ಆಫ್ರಿಕಾ , ಜೋರ್ಡನ್, ಆಲ್ಜಿರೀಯ , ಟ್ಯುನೇಷಿಯಾ , ಲಿಬಿಯಾ, ಮೊರೊಕ್ಕೊ ಸೇರಿದಂತೆ ಸಮಸ್ತ ಮಧ್ಯಪ್ರಾಚ್ಯವೇ ಅರಬ್ ಸಂಸ್ಕೃತಿಯನ್ನು ಒಳಗೊಂಡಿದೆ. ಅಲ್ಲಿ ಯಹೂದಿ, ಕ್ರೈಸ್ತ, ಪಾರಸಿಕ, ಇಸ್ಲಾಂ ಮತಗಳು ಹುಟ್ಟಿ ಹರಡಿ ಆಳಿವೆ. ಯಾವೊಂದೂ ನಶಿಸಿಲ್ಲ! ಆದರೆ ಅಲ್ಲಿ ಹುಟ್ಟಿದ ಸಾಮ್ರಾಜ್ಯಗಳು, ಶಾಂತಿದೂತರನ್ನು ಅಲ್ಲಿನ ರಾಜಕೀಯ ಅನೈತಿಕವಾಗಿ ಹತ್ಯೆ ಮಾಡಿದೆ. ಜೆರುಸೆಲಂ ನಂಥ ನಗರಿ ಸಾವಿರಾರು ವರ್ಷಗಳಿಂದ ರಕ್ತಪಾತಗಳಲ್ಲಿ ಮುಳುಗೆದ್ದಿದೆ. ಆದರೂ 'ಪವಿತ್ರ ನಗರ' ಎಂಬ ತಲೆಪಟ್ಟಿಯನ್ನು ಹೊತ್ತುಕೊಂಡೇ ಇದೆ. ಹೀಗಿರುವಾಗ ಅಲ್ಲಿನ ಹೆಣ್ಣು ಮಕ್ಕಳ ಕಾವ್ಯ ಬಹಳ ಆಸಕ್ತಿಯನ್ನು ಹುಟ್ಟಿಸದೇ ಇರದು. ಮಧ್ಯಪ್ರಾಚ್ಯ ಕೂಡ ನಮ್ಮ ದೇಶದ ಹಾಗೆ ಪುರಾತನ ಮತ್ತು ವೈವಿಧ್ಯ ಪೂರ್ಣ.
ಅರಬ್ ಮಹಿಳೆಯರ ಕಾವ್ಯ ಎಂದಾಕ್ಷಣ 'ಅರಬ್ ಮಹಿಳೆಯರು ಕಾವ್ಯ ಬರೆಯುವುದು ಉಂಟೇ (ಸಾಧ್ಯವಿದೆಯೇ) ?' ಎಂದು ಪ್ರಶ್ನಿಸಬಹುದಾದ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಅರಬ್ ರಾಷ್ಟ್ರಗಳ ಸಾಮಾಜಿಕ ಕಾನೂನುಗಳು, ಹೆಣ್ಣು ಮಕ್ಕಳ ಸಿಗಬೇಕಾದ ಮಾನವ ಹಕ್ಕುಗಳ ನಿರಾಕರಣೆ, ಹೇಳಲಾಗದಷ್ಟು ದೌರ್ಜನ್ಯಗಳು ಇದೆಲ್ಲವೂ ನಮ್ಮನ್ನು ನಂಬದಿರುವಂತೆ ಮಾಡುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಆದರೂ ಕಾಲಕಾಲದಲ್ಲಿ ಅರಬ್ ಕಾವ್ಯದಲ್ಲಿ ಮಹಿಳೆಯರ ಪ್ರಮುಖ ಉಪಸ್ಥಿತಿಯನ್ನು ಈ ಇಡೀ ಕಾವ್ಯ ಸಂಪುಟ ನಮ್ಮ ಮುಂದೆ ಎತ್ತಿ ತೋರಿಸುತ್ತಿದೆ. ಹಾಗಿದ್ದರೆ ಅರಬ್ ಮಹಿಳಾ ಕಾವ್ಯ ಯಾವಾಗ? ಎಲ್ಲಿ? ಹೇಗೆ? ಯಾರಿಂದ? ಹುಟ್ಟಿಕೊಂಡಿತು ಎನ್ನುವ ಕುತೂಹಲವಿದ್ದರೆ ಈ ಕಾವ್ಯ ಸಂಪುಟದ ತುಸು ದೀರ್ಘಪ್ರಸ್ತಾವನೆಯನ್ನು ಓದಬೇಕು. ಕವಿತೆಗಳ ಅನುವಾದದ ಜೊತೆಗೆ ಕಮಲಾ ಅವರು ಅಲ್ಲಿನ ಕಾವ್ಯ -ಕಾಲವನ್ನು ಅಭ್ಯಾಸ ಮಾಡಿ ಕಾಲಾನುಕ್ರಮದಲ್ಲಿ ಅಲ್ಲಿನ ಪ್ರಮುಖ ಅರಬ್ ಕವಯತ್ರಿಯರ ವಿವರಗಳನ್ನು ಅಂದಿನ ರಾಜಕೀಯ -ಸಾಮಾಜಿಕ ಪರಿಸ್ಥಿತಿಗಳ ಜೊತೆಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ . ಇಂತಹವೊಂದು ಪ್ರಯತ್ನಕ್ಕಾಗಿ ಅವರು ಆರೇಳು ವರ್ಷ ಫ್ರೆಂಚ್ ಭಾಷೆಯನ್ನು ಕಲಿತು ಅಭ್ಯಾಸವನ್ನು ಮಾಡಿ ಉತ್ತಮ ಕವಿತೆಗಳನ್ನು ಬಹಳಷ್ಟು ಕಡೆ ಅರಸಿ ಆಯ್ಕೆ ಮಾಡಿದ್ದಾರೆ. ಅವರೇ ಹೇಳುವಂತೆ ನಥಾಲಿ ಹಂದರ್ ರ 'ದಿ ಪೊಯೆಟ್ರಿ ಆಫ್ ಅರಬ್ ವಿಮೆನ್' ಅವುಗಳಲ್ಲಿ ಮುಖ್ಯವಾದ ಮೂಲಕೃತಿ. ನಥಾಲಿ ಫ್ರೆಂಚ್ ಅಮೇರಿಕನ್ ಆದರೂ ಅವರು ಮೂಲ ಪ್ಯಾಲೆಸ್ಟೈನೀ ವಲಸಿಗರು. ಹಾಗಾಗಿ ನಥಾಲಿ ಅವರ ಕಾವ್ಯ ಸಂಗ್ರಹ ಪ್ರಮಾಣೀಕೃತವಾದುದು. ಅವರಿಗೆ ಮಧ್ಯಪ್ರಾಚ್ಯದ ಒಳಉಸಿರಿನ ಸದ್ದು ಉಳಿದವರಿಗಿಂತ ಚೆನ್ನಾಗಿಯೇ ಕೇಳುತ್ತದೆ.

ಕವಯತ್ರಿಯವರೇ ಹೇಳುವಂತೆ ಇಪ್ಪತ್ತನೆಯ ಶತಮಾನದ ಉತ್ತರಾರ್ಧವನ್ನು ಅರಬ್ ಮಹಿಳಾ ಸಾಹಿತ್ಯದ ಮುಂಬೆಳಗಿನ ಕಾಲವೆಂದೇ ಗುರುತಿಸಲಾಗಿದೆ. ಈ ಕಾಲದಲ್ಲಿ ಬಂದ ಸಾಹಿತ್ಯವು ಅರಬ್ ಲೋಕದ ರಾಜಕೀಯ -ಸಾಮಾಜಿಕ -ಸಾಂಸ್ಕೃತಿಕ ಸ್ಥಾನ ಪಲ್ಲಟಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವುದರಲ್ಲಿ ಎಷ್ಟು ಸಫಲವಾಗಿಯೆನ್ನುವುದು ಪ್ರಸ್ತುತ ಕಾವ್ಯ ಸಂಪುಟದ ನೂರಾರು ಕವಿತೆಗಳ ಓದಿನಲ್ಲಿ ನಮ್ಮ ಗಮನ ಬರುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಪ್ರಸ್ತಾವನೆಯಲ್ಲಿ ಇಸ್ಲಾಂ ಪೂರ್ವಕಾಲದಿಂದ ಇವತ್ತಿನ ಆಧುನಿಕ ಕಾಲದವರೆಗೆ ಅರಬ್ ಲೇಖಕಿಯರು. ಸಮಾಜ, ಸಾಹಿತ್ಯ ಮತ್ತು ಸನ್ನಿವೇಶಗಳ ವಿವರಣೆ ಉಪಕಾರಿಯಾಗಿದೆ. ಉದಾರವಾದಿಗಳಿಂದ ವರ್ತಮಾನದಲ್ಲಿ ತೀವ್ರ ಟೀಕೆಗೆ ಒಳಗಾಗುತ್ತಿರುವ ಹಿಜಾಬ್ (ಮುಖಗವಸು) ಇಸ್ಲಾಂ ಷರಿಯಾದ ಭಾಗವಲ್ಲವೆಂದು ೧೯ನೇ ಶತಮಾನದ ಮೊದಲಲ್ಲೇ ಅಂದರೆ ನೂರು ವರ್ಷಗಳ ಹಿಂದೆಯೇ ಅರಬ್ ಲೇಖಕಿಯರು ವಿರೋಧಿಸಿದ್ದಾರೆ. ಸಂತಸದ ಸಂಗತಿಯೆಂದರೆ ಇದನ್ನು ಅಂದಿನ ಕೆಲವು ಲೇಖಕರು ಕೂಡ ಬೆಂಬಲಿಸಿದ್ದು. ಇಂತಹ ಹಲವು ರೋಚಕ ಸಂಗತಿಗಳೂ ಕೂಡ ಪುಸ್ತಕದಲ್ಲಿವೆ.



ಅನುವಾದ ಮತ್ತು ಕಾವ್ಯದ ಸ್ವರೂಪ :
ಭಾಷೆಯಿಂದ ಭಾಷೆಗೆ ತರ್ಜುಮೆಗೊಳ್ಳುವಾಗ ಕಾವ್ಯ 'ಪರಕಾಯ ಪ್ರವೇಶ' ವನ್ನು ಮಾಡಲೇಬೇಕು. ಯಥಾಸ್ಥಿತಿಯಲ್ಲಿ ಬಂದರೆ ಎರಡು ದೇಶ-ಭಾಷೆಯ ಪರಿಸರ ವಿಭಿನ್ನವಾಗಿದ್ದಾಗ ಕಾವ್ಯದ ಉದ್ದೇಶವಾಗಲಿ ಅರ್ಥವಾಗಲಿ ನಮಗೆ ಮುಟ್ಟುವುದು ಸಾಧ್ಯವಾಗದೆ ವಿಫಲ ಪ್ರಯತ್ನವಾಗಿಬಿಡುತ್ತದೆ. ಅನುವಾದದಲ್ಲಿ 'ಕಾವ್ಯ ಸವಕಳಿ' ಹೆಚ್ಚಾಗಿ ಸಂಭವಿಸುವ ಅಪಾಯವೂ ಇದೆ. ಆ ದೃಷ್ಟಿಯಿಂದ ಅನುವಾದ ಅನ್ನುವುದು ಭಾಷಿಕ ಭಟ್ಟಿ ಇಳಿಸುವ ಕಾಯಕವಲ್ಲ. ಅದೊಂದು ಸ್ವತಂತ್ರ ಸೃಜನಶೀಲ ಕೃತಿ.
ಈ ಕವಿತೆಗಳ ಅನುವಾದದ ಆರಂಭದ ನಂತರದ ನಡುವಿನ ಆರೇಳು ವರ್ಷಗಳಲ್ಲಿ ಕಮಲಾ ಅವರು ಫ್ರೆಂಚ್ ಭಾಷೆಯನ್ನೂ ಕಲಿತಿದ್ದಾರೆ. ಇದರಿಂದ ಓದಿಗೆ ಮತ್ತೊಂದು ಮಧ್ಯವರ್ತಿ ಭಾಷೆಯನ್ನು ಅವಲಂಬನೆ ತಪ್ಪಿದೆ ಮತ್ತು ಕಾವ್ಯದ ಮೂಲ ದ್ರವ್ಯವನ್ನು ನೇರವಾಗಿ ಫ್ರೆಂಚ್ ನಿಂದ್ ಕನ್ನಡಕ್ಕೆ ತಂದು ನಮಗೆ ಉಣಬಡಿಸಲು ಸಾಧ್ಯವಾಗಿದೆ. ಹಾಗಾಗಿಯೇ ಇಲ್ಲಿನ ಕವಿತೆಗಳ ಯಾವ ತುದಿಯಲ್ಲಿಯೂ ಒಗ್ಗದ ಪದವಿಲ್ಲ, ಒಲಿಯದ ನುಡಿಯಿಲ್ಲ, ಅಗ್ಗದ ಸಾಲುಗಳು ಖಂಡಿತ ಲಭ್ಯವಿಲ್ಲ. ಕಾವ್ಯದ ಹರಿತ, ಮೊನಚು ಮತ್ತು ಲೋಕದೃಷ್ಟಿ ಭಾಷೆಯಿಂದ ಭಾಷೆಗೆ, ದೇಶದಿಂದ ದೇಶಕ್ಕೆ ಹೋದಂತೆಲ್ಲಾ ಸೂಕ್ಷ್ಮವಾಗಬೇಕು. ಅಂತಹ ಸೂಕ್ಷ್ಮತೆಯನ್ನು ಕಮಲಾ ಅವರ ಅನುವಾದದಲ್ಲಿ ಕಾಣಬಹುದಾಗಿದೆ.
ಈ ಕವಿತೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ,

''
ಅವಳ ಕೂದಲು ಅದೆಷ್ಟು ನೀಳ, ನೀಳವೆಂದರೆ
ನಿಂತಾಗ ಕಾಲಿಗೆ ಸುತ್ತಿಕೊಳ್ಳುತ್ತಾಳೆ
ಅವಳ ಬೆರಳುಗಳು ಅದೆಷ್ಟು ನೀಳ, ನೀಳವೆಂದರೆ
ತಾವರೆಯ ಗಿಡದ ಹಣ್ಣ ಕೋಣೆಯಿಂದಲೇ ಕೀಳುತ್ತಾಳೆ
ತೊಡೆಯಿಂದ ಉಕ್ಕಿ ಹರಿವ ಮಳೆಯಲ್ಲಿ ಮಡಿಯುಟ್ಟು
ಕನಸು ಕಾಣುತ್ತಾಳೆ ''

ಒಂದು ದೇಶ - ಪುಟ ೧೮೧
ಫೋಜಿಯಾ ಅನು-ಖಾಲಿದ್

ಇದೊಂದು ಪುಟ್ಟ ಕವಿತೆ ಒಂದು ದೇಶವನ್ನು ಒಂದು ಹೆಣ್ಣನ್ನು ಅದೆಷ್ಟು ವಿಸ್ತಾರವಾದ ನೆಲೆಯಲ್ಲಿ ಕಟ್ಟಿಕೊಡುತ್ತದೆ ಎಂಬುದನ್ನು ಹೇಳಲಾಗದು ಬದಲಿಗೆ ಮತ್ತಷ್ಟು ಬಾರಿ ಓದಿ ಓದಿ ಕಣ್ಣಿನಲ್ಲಿ ಕಟ್ಟಿಕೊಳ್ಳಬೇಕು. ಈ ಕಟ್ಟಿಕೊಳ್ಳುವಿಕೆ ಹೆಣ್ತನವನ್ನು ಉಳ್ಳ ಓದುಗನಿಗೆ ಕಷ್ಟವಾಗದು. ಅವನ ತುಟಿಯ ತುದಿಯಿಂದಲೇ ಕವಿತೆ ಸಾಕ್ಷಾತ್ಕಾರವಾಗುತ್ತಾ ಸಾಗುತ್ತದೆ.
ಈ ಸಂಪುಟದಲ್ಲಿ ಕವಿತೆಗಳು ಗಾತ್ರದಲ್ಲಿ ಐದಾರು ಸಾಲಿನ ಪುಟ್ಟ ಕವಿತೆಯಿಂದ ಹಿಡಿದು ಗದ್ಯಕವನಗಳಂತಹ ಪ್ರಯೋಗಗಳ ವರೆಗೆ ಹರಡಿಕೊಂಡಿವೆ. ಅವುಗಳ ಅಭಿವ್ಯಕ್ತಿಯ ಪ್ರಮಾಣ ಮತ್ತು ಪರಿಣಾಮಗಳಲ್ಲಿ ಮಾತ್ರ ಅಂತಹ ಗುರುತರ ವ್ಯತ್ಯಾಸವೇನೂ ನನ್ನ ಓದಿನಲ್ಲಿ ಕಂಡು ಬರಲಿಲ್ಲ. ಸಾಲುಸಾಲುಗಳು ಕೂಡ ಪ್ರಭಾವಶಾಲಿಯಾಗಿವೆ.

ಆತ್ಮಕ್ಕೇ ಹೊಲಿದ
ಅರೇಬಿಯಾದ ಕಸೂತಿ ವಸ್ತ್ರ
ನನನ್ ಮನೆಯ ನೆನಪು
ಪುಟ - ೨೨೪ , ಲೊರೆನ್ ಜರೋ -ಜೊಜೊನಿಸ್

ಇರುಳಿಗೆ ನೋವು , ವ್ಯಥೆ ತುಂಬಿ
ಕಣ್ಣೊಳಗಿನ ನಿದಿರೆಯ ಕಸಿಯುತ್ತದೆ
ಪುಟ ೧೩೨ , ನಜಿಕ್ ಅಲ್ -ಮಲೈಕಾ

ಸೂರ್ಯ ಮೈಮೇಲೆ ಸುರಿಯುತ್ತಾನೆ
ಒಳಗೆ, ಭಾವನೆಗಳ ಕಸೂತಿ ಮಾಡಿದ ಬೆಳ್ಳಿಕೊಳ
ಪುಟ ೧೨೯, ಧಾಬ್ಯಾ ಖಮೀಸ್

ಇವುಗಳಲ್ಲದೇ
ಬೈರುಟ್ , ಕ್ಲೇರ್ ಗೆಬೀಲಿ
ಹಳದಿ ಕೈಗವಸು , ನಯೋಮಿ ಶಿಹಾದ್ ನೈ
ಬಾಗಿದ ಮನೆಯಿಂದ, ಸಬಾಹ್ ಅಲ್ ಖರ್ರತ್ ಜ್ವೆನ್
ಋತುಮಾನಗಳು , ಸಫಾ ಪಾತಿ
ಈ ಎಲ್ಲ ಗಪದ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ.

ಮೂರೂ ನೂರು ಪುಟ ಈ ಸಂಪುಟದಲ್ಲಿ ಎಪ್ಪತ್ತಾರು ಜನ ಅರಬ್ ಕವಯತ್ರಿಯರ ಕವಿತೆಗಳಿವೆ. ಈ ಎಲ್ಲರೂ ೧೯೪೦ ನಂತರದ ಎರಡು ದಶಕಗಳಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಪ್ರದೇಶಗಳಲ್ಲಿ ಜನಿಸಿದವರು. ಅವರಲ್ಲಿ ಕೆಲವರು ತವರಿನಲ್ಲೇ ನೆಲೆಸಿದ್ದರೆ ಮತ್ತು ಕೆಲವರು ಪಶ್ಚಿಮ ದೇಶಗಳಲ್ಲಿ ಬದುಕು ಕಂಡುಕೊಂಡಿದ್ದಾರೆ. ಈ ಅವಧಿಯಲ್ಲಿ ಮಧ್ಯ ಪ್ರಾಚ್ಯ ಕೂಡ ಸಾಕಷ್ಟು ರಾಜಕಾರಣದ ಏಳುಬೀಳುಗಳನ್ನ, ಸಾಮಾಜಿಕ ಬದುಕಿನಲ್ಲಿ ಬರ್ಬರತೆಯನ್ನು ಕಂಡಿದೆ. ಹಾಗಾಗಿ ಈ ಕಾವ್ಯಗಳು ಆ ಕಾಲದ ದಿನಚರಿಯನ್ನು ತಮ್ಮೊಳಗೆ ಹಿಡಿದಿಟ್ಟುಕೊಂಡಿವೆ.

ಗಾಜಾ ತೆವಳುತ್ತಿದೆ
ತನ್ನ ತಣ್ಣನೆಯ ಕೈಕಾಲುಗಳೊಂದಿಗೆ
ಪಾಪದ ಕೊಡ ತುಂಬಿ ತುಳುಕಿರುವ
'ಉರಿನಗರ'ದ ನನ್ನ ಜೀವನದಂತೆ
ಪುಟ - ೧೨೬ , ದೋನಿಯ ಎಲ್ - ಅಮಲ್ ಇಸ್ಮಾಯಿಲ್

ನೆನಪಿಸಿಕೋ - ಪುಟ್ಟಕಂದನ ಗುಟ್ಟು ಸಾಮ್ರಾಜ್ಯವನ್ನು ,
ಲೆಬನಾನ್ ಬೆಟ್ಟದ ಪಂಜರದ ತಳದಲ್ಲಿ
ಸತ್ತ ಹಕ್ಕಿಗಳ ಬಗೆಗಿನ ಶಕುನ ..
ಹೇಗೆ ಓಡುವುದೆಂದು ಮಾತ್ರ ನಮಗೆ ತಿಳಿಯಲಿಲ್ಲ.
ಪುಟ ೧೪೬ - ನದಿಯಾ ತುಯೇನಿ

ನಗರಗಳನ್ನು ಕಟ್ಟಿ
ಕಾಲಕ್ಕೆ , ಕಾಲದ ಬೀಜಗಳಿಗೆ,
ಹೃದಯಕ್ಕೆ , ಕಣ್ಣಿಗೆ ,
ಯುಗಕ್ಕೆ ಮತ್ತು ಮಕ್ಕಳಿಗೆ
ಸಿಪ್ಪೆಯನ್ನು ಕಿತ್ತೆಸೆಯಿರಿ -ನಂತರ!
ಗಡಿಯಿರದ ಗಾಳಿಗೆ
ನಿಮ್ಮನು ತೂಗು ಹಾಕಿಕೊಳ್ಳಿ
ಪುಟ - ೬೪ ಆಂದ್ರೆ ಶೆದಿ

ಬಿಟ್ಟುಬಿಡು ನನ್ನ ;
ಇರುಳಿಗೆ,
'ಸುನ್ನಿಗಳ ಕಿಟಕಿಯಿಂದ
ಹೊಮ್ಮಿಬರುವ ಕತ್ತಲಿಗೆ,
ನೋವಿನಿಂದ ಚರಗುಟ್ಟುವ ಒಣಗಿದೆಲೆಗಳಿಗೆ
ಪುಟ - ೨೧೬ , ಲೀನಾ ಟಿಬಿ

ಈ ಕವಿತೆಗಳ ಆಯ್ದ ಸಾಲುಗಳು ಅಲ್ಲಿನ ಸ್ಥಿತ್ಯಂತರಗಳ ಅನಧಿಕೃತ ದಾಖಲೆಗಳೇ ಆಗಿವೆ. ದೇಶ - ಗಡಿ -ಧರ್ಮ - ಜಾತಿ ಕಡೆಗೆ ಹೆಣ್ಣು ಎನ್ನುವ ತಾರತಮ್ಯಗಳು ಹೇಗೆಲ್ಲಾ ನಮ್ಮನು ನಮ್ಮ ಬದುಕನ್ನು ಶೋಷಿಸಿಕೊಂಡು, ದೌರ್ಜನ್ಯಗಳನ್ನು ಪೋಷಿಸಿಕೊಂಡು ಬಂದಿವೆ ಎನ್ನುವುದರ ಇತಿಹಾಸವೂ ಈ ಕವಿತೆಗಳಲ್ಲಿ ಅಡಗಿಕೊಂಡಿದೆ. ಆದರೆ ಅದನ್ನು ಹುಡುಕಿ ಓದುವ ಮತ್ತು ಗಂಭೀರವಾಗಿ ಪರಿಗಣಿಸುವ ಮನಸುಗಳು ಈ ಕಾಲಕ್ಕೆ ತುರ್ತಾಗಿ ಬೇಕಾಗಿವೆ.

***

'' ಬೆಟ್ಟದಡಿಯ
ಕಲ್ಲುಬಂಡೆಗಳ ನಡುವೆ
ಸಾಯಲೆಂದು ಚಿಟ್ಟೆಯೊಂದು ಬಂತು!
ಬೆಟ್ಟ ತನ್ನ ನೆರಳನ್ನು ಚೆಲ್ಲಿ
ಸಾವಿನ ಗುಟ್ಟನ್ನು ಮುಚ್ಚಿಟ್ಟುಬಿಟ್ಟಿತು! ''
ಪುಟ - ೭೬ , ಎಟೆಲ್ ಅದ್ನಾನ್

ಝೆನ್ ಕಾವ್ಯದಂತಿರುವ ಈ ರೂಪಕಕಾವ್ಯ ದೊಡ್ಡ ದೊಡ್ಡ ಕವಿತೆಗಳ ಅಕ್ಷರ ರಾಶಿಯನ್ನೇ ನಾಚಿಸಿ ಅರ್ಥಸಂಪತ್ತಿನ ಅಧಿಪತಿಯಾಗಿಬಿಡುತ್ತದೆ. ಅರಬ್ಬಿನ ಬಿಸಿಲ ಬೇಗೆಯ ನಡುವೆ ಬೆಟ್ಟದಡಿ ಸಿಕ್ಕು ಸಾಯಲು ಬಂದ ಚಿಟ್ಟೆ ಅದರ ನೆರಳಲ್ಲೇ ಸಾವ ಮರೆತು ಬದುಕು ಕಟ್ಟಿಕೊಳ್ಳುವುದು ಎಷ್ಟು ಚೆಂದ. ಚೂರಾದರೂ ಭಾಷೆ ಮತ್ತು ಭಾವ ಇದು ಅನುವಾದ ಎನಿಸದೆ ನಮ್ಮದೇ ಜೀವ ಮಿಡಿದುದೊಂದು ಸಾಲಿನಂತೆ ಮಿಂಚಿದೆ ಕವಿತೆ.

‘’ಸಾವು,
ಎತ್ತರೆತ್ತರದ ಮರಗಳು ರಾತ್ರಿ ಬೇರಿನೊಂದಿಗೆ
ಚೆಲ್ಲಾಟವಾಡಿ ಎಲೆಗಳ ಮಬ್ಬುಗೊಳಿಸುತ್ತವೆ
ಸಾವು,
ಆಕಾರವಿಲ್ಲದ ದೇಹ
ಅಲೌಕಿಕ ಅಳಿವಿಗೆ ಹೊಗೆಯಂತೆ ಹಂಬಲಿಸುತ್ತದೆ
ನೀನದರ ನೆರಳಿನಲ್ಲಿ ಹೆಜ್ಜೆಗುರುತು ಬರೆಯುತ್ತೀಯ
ನಜ್ಜುಗುಜ್ಜಾದ ಎದೆಯಲ್ಲಿ ಮಳೆಯ ಮುಚ್ಚಿಡುತ್ತೀಯ
ನಿನ್ನ ಹೆಜ್ಜೆಗೆ ದಾರಿಹೋಕರ ದಾರಿಯೇ ಮರೆಯಾಗುತ್ತದೆ ‘’
ಪುಟ - ೬೨ , ಅಲ್ - ಜಹ್ರಾ ಅಲ್ - ಮನ್ಸೂರಿ

ಎಷ್ಟೋ ದಿನಗಳ ನಂತರ
ನಿನ್ನ 'ನಿಲುವುಗನ್ನಡಿ'ಯೆದುರು ನಿಂತರೆ
ಧೂಳು ಹಿಡಿದ ಕಪ್ಪಿನಲಿ
ಹೇರ್ ಪಿನ್ನುಗಳು !
ಪುಟ -೫೪ ಡಿಯಾಸ್ಪೋರ

ನೋವೇ ಒಂದಷ್ಟು ಕಾಲ ದೂರವಿರು
ನನ್ನ ನೋಟ್ ಪುಸ್ತಕದಲ್ಲಿ
ಎದೆಯ ತೋಟಗಳ ಬರೆಯುತ್ತೇನೆ
ಪುಟ - ೨೭೩ , ಹಮ್ದ ಖಮೀಸ್

ಈ ಇಡೀ ಕಾವ್ಯಸಂಪುಟ ಹೆಣ್ಣಿನ ಕಣ್ಣಿನೊಳಗಿನ ಹಸಿಕೆಂಡದಂತೆ ಓದುತ್ತ ಸಾಗಿದಂತೆಲ್ಲಾ ಸುಡುತ್ತದೆ, ಬೆಚ್ಚಗಾಗಿಸುತ್ತದೆ, ಇನ್ನೊಂದಷ್ಟು ಹೆಜ್ಜೆ ಮುಂದಿಟ್ಟರೆ ಕಣ್ಣಾಲಿ ತುಂಬಿಸುತ್ತದೆ. ಸಾವು ಅದರ ಆಕಾರವಿಲ್ಲದ ದೇಹ ಮತ್ತು ಅದರ ಪ್ರಯಾಣ ನಮ್ಮ ನೆರಳಾಗೇ ಸಾಗುತ್ತಿರುವ ದೃಶ್ಯವನ್ನು ಕವಿತೆ ಎಷ್ಟು ಸರಳವಾಗಿ ಹೇಳುತ್ತದೆಯೆಂದರೆ ಒಮ್ಮೆ ಬಾಯಿ ಬಿಟ್ಟು ಓದಿದರೆ ಸಾಕು ಅನಿಸುತ್ತದೆ. ಉಳಿದ ಅರ್ಥವ್ಯಾಖ್ಯಾನ ವ್ಯರ್ಥ.




ಪೌರಸ್ತ್ಯ ಚಿಂತನೆ ಮತ್ತು ಕನ್ನಡ ಸಾಹಿತ್ಯ
ಮೂರೂ ನೂರು ಪುಟಗಳಷ್ಟು ದೊಡ್ಡದಿರುವ ಈ ಅನುವಾದ ಸಂಗ್ರಹ ಬಹುಶಃ ನನ್ನ ಓದಿನ ಮಿತಿಯಲ್ಲಿ ಕನ್ನಡದ ಮೊತ್ತ ಮೊದಲ ಅರಬ್ ಕಾವ್ಯದ ಸಂಪುಟ. ಅದರಲ್ಲುವು ಅಲ್ಲಿನ ಮಹಿಳಾಲೋಕದ ಒಳದನಿಯನ್ನು ತೆರೆದಿಟ್ಟ ಮಹತ್ವದ ಪುಸ್ತಕ ಇದಾಗಿದೆ. ವರ್ತಮಾನದ ಹಲವು ತಲ್ಲಣಗಳ ಹಿನ್ನೆಲೆಯಲ್ಲಿ ಅರಬ್ ಮಹಿಳಾ ಸಂವೇದನೆಯ ಕುರಿತ ಕುತೂಹಲ ಬಹಳ ದೊಡ್ಡದು. ಅದಕ್ಕೆ ಸಂಬಂಧಿಸಿದಂತೆ ಈ ಪುಸ್ತಕ ಪೂರ್ಣ ನಮ್ಮ ಕುತೂಹಲವನ್ನು ತಣಿಸದಿದ್ದರೂ ಕೆಲವು ದಶಕಗಳ ಹಿಂದಿನ ಮತ್ತು ಇವತ್ತಿನ ದಿನಗಳ ಕುರಿತ ಒಂದು ವಾರೆನೋಟ ನಮಗೆ ಖಂಡಿತ ಲಭ್ಯ.
ಆಧುನಿಕ ಕಾಲವನ್ನು ಮುಖ್ಯವಾಗಿಟ್ಟುಕೊಂಡು ಅರಬ್ಬಿನ ಸಾಹಿತ್ಯ ನಿರ್ಮಾಣದ ಹಿನ್ನೆಲೆ, ಆಧುನಿಕ ಕಾವ್ಯ ಮತ್ತು ಮಹಿಳೆಯರನ್ನು, ಅರಬ್ ದೇಶಕಾಲ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ತುಂಬಾ ಅಚ್ಚುಕಟ್ಟಾಗಿ ಈ ಪುಸ್ತಕವು ಪರಿಚಯಿಸಿದೆ. ಪ್ರಸ್ತಾವನೆಯನ್ನು ಓದದೇ ಬರಿಯ ಕಾವ್ಯಕ್ಕೆ ಪ್ರವೇಶಿಸಿದರೆ ಕಾವ್ಯನಿರ್ಮಿತಿಯ ಹಿನ್ನೆಲೆಯನ್ನು ಅರ್ಥಮಾಡಿಕೊಳುವುದರಲ್ಲಿ ಓದುಗನಿಗೆ ಕಷ್ಟವಾಗಬಹುದು. ಕಾರಣ ಅರಬ್ ಸಂಸ್ಕೃತಿ ಇಂದು ನಾವು ನೋಡುವಷ್ಟು ಮಟ್ಟಿಗೆ ಧರ್ಮಾಂಧತೆ , ಜನಾಂಗೀಯ ದ್ವೇಷ, ಮಹಿಳಾ ದೌರ್ಜನ್ಯ , ಮಾನವ ಹಕ್ಕುಗಳ ಉಲ್ಲಂಘನೆಯಂತಹ ಕರ್ಮಕೂಪದಲ್ಲಿ ಸಿಲುಕಿರಲಿಲ್ಲ. ನಾಗರೀಕತೆಯ ಉಗಮ ಸ್ಥಾನಗಳಲ್ಲಿ ಒಂದಾದ ಮಧ್ಯಪ್ರಾಚ್ಯ ಉತ್ತಮವಾದ ಏಳ್ಗೆಯನ್ನು ಸಾಧಿಸಿದ್ದ ಜೊತೆಗೆ ಕಲೆ, ಸಾಹಿತ, ವಾಸ್ತುಶಿಲ್ಪ, ವಿಜ್ಞಾನ ಮೊದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದ ನಾಡಾಗಿತ್ತು . ಆದರೆ ಇಂದು ಅದರ ಸ್ಥಿತಿಯೂ ನರಕ ಸದೃಶವಾಗಿದೆ. ಈ ನಾಕ ನರಕಗಳ ನಡುವೆ ಅಲ್ಲಿನ ಹೆಣ್ಣು ಮಕ್ಕಳು ಕಟ್ಟಿದ ಕಾವ್ಯ ಈ ಪುಸ್ತಕದ ಮೂಲಕ ಕನ್ನಡದ ಓದುಗರಿಗೆ ಲಭ್ಯವಾಗಿದೆ.

ಪ್ಯಾಲೆಸ್ಟೈನ್ ಚಿಂತಕ , ಬರಹಗಾರ ಎಡ್ವರ್ಡ್ ಸೈದ್ ನಮಗೆ ಒದಗಿಸಿದ ಪೌರಸ್ತ್ಯ ಚಿಂತನೆ ನೆಲೆಗಟ್ಟಿನ ಓದಿಗೆ ಈ ಕೃತಿ ಸಹಾಯಕವಾಗಬಲ್ಲುದು. ಪೌರಸ್ತ್ಯ ಚಿಂತನೆಯನ್ನು ಅರಬ್ ಗೆ ಸೀಮಿತಮಾಡುವುದು ಈ ಮಾತಿನ ಉದ್ದೇಶವಲ್ಲ. ಹೊರ ಪ್ರಪಂಚಕ್ಕೆ ಪಾಶ್ಚಿಮಾತ್ಯ ಸಾಹಿತ್ಯ ಪ್ರಮಾಣಗಳಿಗೆ ಹೊರತಾದ ಮಾನದಂಡಗಳನ್ನು ರೂಪಿಸಿಕೊಳ್ಳುವುದು ಯಾಕೆ ಅವಶ್ಯಕವಾಯಿತು ಎನ್ನುವುದನ್ನು ತಿಳಿಯಲು ಮತ್ತು ನಮ್ಮ ಸಾಹಿತ್ಯ , ಕಾವ್ಯಗಳು ಹೇಗೆ ಇವುಗಳಿಗೆಲ್ಲಾ ವಿಭಿನ್ನ ಎಂದು ತಿಳಿದುಕೊಳ್ಳಲು ಪೌರಸ್ತ್ಯ ಚಿಂತನೆಯ ಅಗತ್ಯವಿದೆ. ಇದು ಶುರುವಾಗಿ ನಾಲ್ಕಾರು ದಶಕಗಳೇ ಕಳೆದರೂ ಈ ಕುರಿತ ಗಂಭೀರ ಚರ್ಚೆಗಳನ್ನು ನಾವು ಎತ್ತಿಕೊಳ್ಳುವುದರಲ್ಲಿ ಎಲ್ಲಿಯೋ ಸೋತಿದ್ದೇವೆ. ( ಈ ಕುರಿತು ಸಿ ಏನ್ ರಾಮಚಂದ್ರನ್ ಅವರ ಬರಹಗಳು ಮಾತ್ರ ಹೆಚ್ಚು ಚಾಲ್ತಿಯಲ್ಲಿವೆ ) ಹಾಗಾಗಿ ಈ ಕಾವ್ಯದ ಓದು ನಮಗೆ ಪೌರಸ್ತ್ಯ ಚಿಂತನೆಯ ಓದಿಗೆ ಸಹಾಯಕವಾಗಬಲ್ಲುದು ಎಂದೆನಿಸುತ್ತದೆ.

ಕಡೆಯಲ್ಲೊಂದು ಆಸಕ್ತಿಕರ ಸಂಗತಿಯು ನೆನಪಾಯಿತು ಅರಬ್ ಅಮೇರಿಕನ್ ಬರಹಗಾರರರು ತಮ್ಮ ಕಾವ್ಯ - ಬರಹಗಳನ್ನು ಆಹಾರದ ಶೀರ್ಷಿಕೆಗಳಲ್ಲಿ ಅಭಿವ್ಯಕ್ತಿಸುವ ಕುರಿತ ಸಂಗತಿಯನ್ನು ಕಮಲಾ ಅವರು ಈ ಪುಸ್ತಕದ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ. (ಉದಾ : ಗ್ರೇಪ್ ಲೀವ್ಸ್ ; ಸೆಂಚುರಿ ಆಫ್ ಅರನ್ ಅಮೇರಿಕನ್ ಪೊಯೆಟ್ರಿ ; ಫುಡ್ ಫಾರ್ ಅವರ್ ಗ್ರ್ಯಾಂಡ್ ಮದರ್ಸ್ ) ಇದು ಬಹಳ ಕುತೂಹಲಭರಿತವಾಗಿದೆ. ಆಹಾರ ಮತ್ತು ಆಸ್ವಾದ ಎನ್ನುವುದು ಎಲ್ಲಿಲ್ಲಿಗೆ ತಳುಕು ಹಾಕಿಕೊಂಡಿವೆಯೋ ತಿಳಿಯದು. ಆದರೆ ಆಹಾರ ಮನಷ್ಯನ ಕಲಾಮಾರ್ಗದಲ್ಲಿ ಬಹುಮುಖ್ಯ ವಿಷಯವಾಗಿದೆ. ಆದರೆ ಅದು ಅಷ್ಟೇ ವಸ್ತುನಿಷ್ಠವಾಗಿ ಕಾಣಿಸಿಕೊಳ್ಳುವುದಿಲ್ಲವಷ್ಟೆ. ಅದೊಂದೂತರನಾದ ಗುಪ್ತಗಾಮಿನಿ.
ಅರಬ್ ಮಹಿಳಾ ಕಾವ್ಯದ ಹರವು ತುಂಬಾ ದೊಡ್ಡದಾಗಿದೆ. ಒಂದು ಸಾವಧಾನದ ಓದು ಖಂಡಿತ ಈ ಕೃತಿಗೆ ಬೇಕು. ಅಲ್ಲದೇ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಕಾವ್ಯಪ್ರೇಮಿಗಳು ಈ ಸಂಪುಟವನ್ನು ಓದಲೇಬೇಕೆಂಬುದು ನನ್ನ ಶಿಫಾರಸ್ಸು.