Wednesday, October 8, 2014

ತೂಗಿಬಿಟ್ಟ ಪಾಪದ ಬಟ್ಟಲು



ನೆತ್ತಿಯ ಮೇಲೆ ಒಂದು ಸಣ್ಣ ರಂಧ್ರ ಕೊರೆದು
ಒಂದು ಬಟ್ಟಲು ತೂಗಿ ಬಿಡಲಾಗಿದೆ.
ಐದು ಕೈಗಳು ಇಹದ ಕಡಲಿನಲಿ ಅಪ್ಪಳಿಸುವ
ಉಪ್ಪಿನ ನೀರ ಮೊಗೆಮೊಗೆದು ತುಂಬಿಕೊಳ್ಳುತ್ತಿವೆ.
ಎಷ್ಟು ಧಾರಾಳ
ಎಷ್ಟು ಧಾವಂತ
ಎಷ್ಟು ದಾಹ
ಬಟ್ಟಲ ಹೊಟ್ಟೆ ತುಂಬುತ್ತಿಲ್ಲ
ಮೊಗೆದು ಸುರಿದದ್ದಷ್ಟೂ ನಿಲ್ಲುತ್ತಿಲ್ಲ

ಪಂಪು ಪೈಪು ಜೋಡಿಸಿ ಕಡಲನೇ
ಬಟ್ಟಲಿಗೆ ಬೋರಲು ಇಡಲಾಯಿತು
ನೆತ್ತಿಯ ಪಾದ ನಿಂತಿದ್ದ ಹಾಯಿದೋಣಿ ತಳಕ್ಕೆ ಬಿದ್ದು ಚೂರಾಯಿತು.
ಬಟ್ಟಲಿನ್ನೂ ಖಾಲಿಯೇ!
ದೋಣಿಯ ಕಟ್ಟಿಗೆ ಸುಟ್ಟು ಬೆಂಕಿಯ ತುರುಕಿ
ಮೂಗುಗಳ ಹಿಡಿದು ಜೀವದುಸಿರುಗಳ ಅದುಮಿ
ಬ್ರಹ್ಮಾಂಡವನೇ ಹಿಡಿದು ಬಟ್ಟಲ ಸುರಿಯಲು, ಏನೂ ಆಗಲಿಲ್ಲ.. ತುಂಬಲಿಲ್ಲ

ದಾರಿಹೋಕ ತಿರುಕನೊಬ್ಬ
ತೂಗಿಬಿಟ್ಟ ಪಾಪದ ಬಟ್ಟಲು ರಾದ್ಧಾಂತವ ಕಂಡು
ಜೋಳಿಗೆಯಿಂದ
ಅರ್ಧ ಎಂಜಲು ಹುಣಸೆಹಣ್ಣು ಹಾಕಿದ
ಬಟ್ಟಲು ಥಟ್ಟನೆ ನೆಲಕ್ಕೆ ಬೋರಲು ಬಿದ್ದಿತು
ಬ್ರಹ್ಮರಂಧ್ರದಲ್ಲಿ ಸಹಸ್ರಾರದ ಹೂ ಹುಟ್ಟಿ
ಸರ್ವವೂ ಸ್ವಸ್ಥಾನ ಸೇರಿಕೊಂಡವು. ~

1 comment:

  1. ಪಾಪದ ಕೊಡ ತುಂಬುವವರೆಗೂ ಅದರ ಆಟಾಟೋಪಕಿಲ್ಲ ಕೊನೆ ಮೊದಲು.
    ಮೆರೆದದ್ದು ಮರೆಯಾಗಲೇ ಬೇಕು - ಇದಲ್ಲವೇ ಜಗದ ನಿಯಮ?

    ReplyDelete